ದಾವಣಗೆರೆ:ನಗರದ ಕುವೆಂಪು ಕನ್ನಡ ಭವನದ ರಾಷ್ಟ್ರಕವಿ ಡಾ.ಜಿ.ಎಸ್.ಶಿವರುದ್ರಪ್ಪ ಸಭಾಂಗಣದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಶ್ರೀಕೃಷ್ಣ ಜಯಂತಿಯನ್ನು ಸರಳವಾಗಿ ಆಚರಿಸಲಾಯಿತು.
ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ದೀಪಾ ಜಗದೀಶ್ ಕೃಷ್ಣನ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಮಾತನಾಡಿ, ‘ಭಾರತದ ಪುರಾಣಗಳಲ್ಲಿ ಕೃಷ್ಣ ಹಾಗೂ ರಾಮ ಇಬ್ಬರೂ ಬಹಳ ಶ್ರೇಷ್ಠ ವ್ಯಕ್ತಿತ್ವ ಹೊಂದಿದವರು. ಕೃಷ್ಣನ ಆದರ್ಶ ಹಾಗೂ ತತ್ವಗಳು ಪ್ರಸ್ತುತ. ನಾವೆಲ್ಲರೂ ಅವರ ಆದರ್ಶಗಳನ್ನು ಪಾಲಿಸಿಕೊಂಡು ಹೋದಲ್ಲಿ ಬದುಕು ಹಸನಾಗುತ್ತದೆ’ ಎಂದರು.
ಯಾದವ ಸಮುದಾಯದ ಜಿಲ್ಲಾ ಅಧ್ಯಕ್ಷ ತಿಪ್ಪೇಸ್ವಾಮಿ ಮಾತನಾಡಿ, ‘ಕೊರೊನಾ ಸಂದರ್ಭದಲ್ಲಿ ದೇವರನ್ನೂ ದೂರ ಇಡುವಂತಹ ಪರಿಸ್ಥಿತಿ ಎದುರಾಗಿದ್ದು, ಪ್ರಸ್ತುತ ಭಗವಂತನ ಸ್ಮರಣೆ ಮುಖ್ಯವಾಗಿದೆ. ಹೀಗಾಗಿ ಕೃಷ್ಣ ಜಯಂತಿ ಕಾರ್ಯಕ್ರಮವನ್ನು ಪುಷ್ಪಾರ್ಚನೆ ಮಾಡುವ ಮೂಲಕ ಸರಳವಾಗಿ ಆಚರಿಸಲಾಗಿದೆ’ ಎಂದು ತಿಳಿಸಿದರು.
ದಾವಣಗೆರೆ ತಾಲ್ಲೂಕು ತಹಶೀಲ್ದಾರ್ ಗಿರೀಶ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ರವಿಚಂದ್ರ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಅಶೋಕ ಕುಮಾರ್ ಡಿ, ಜಿಲ್ಲಾ ಯಾದವ ಸಮುದಾಯದ ಕಾರ್ಯದರ್ಶಿ ಗಂಗಾಧರಪ್ಪ ಹಾಗೂ ಉಪಾಧ್ಯಕ್ಷ ಕೆಂಚವೀರಪ್ಪ ಹಾಜರಿದ್ದರು.
ಸ್ಪರ್ಧೆಗಳಿಲ್ಲದ ಹಬ್ಬ:ಪ್ರತಿ ವರ್ಷ ಮಕ್ಕಳಿಗೆ ಕೃಷ್ಣ ವೇಷ ಸ್ಪರ್ಧೆಯನ್ನು ಆಯೋಜಿಸಿ ಅದ್ದೂರಿಯಾಗಿ ಆಚರಿಸಲಾಗುತ್ತಿತ್ತು. ಈ ಬಾರಿ ಕೋವಿಡ್–19 ಕಾರಣದಿಂದಾಗಿ ಶಾಲೆಗಳಿಗೆ ರಜೆ ಇರುವುದರಿಂದ ಯಾವುದೇ ಸ್ಪರ್ಧೆಗಳು ನಡೆದಿಲ್ಲ. ಮನೆಯಲ್ಲೇ ಸರಳವಾಗಿ ಕೃಷ್ಣನನ್ನು ಪೂಜಿಸುವ ಮೂಲಕ ಸರಳವಾಗಿ ಆಚರಿಸಲಾಯಿತು. ಮಕ್ಕಳಿಗೆ ರಾಧೆ ಹಾಗೂ ಕೃಷ್ಣನ ವೇಷ ಹಾಕಿ, ಕುಟುಂಬದವರು ಖುಷಿಪಟ್ಟರು. ಅಲ್ಲದೇ ಫೋಟೊ ಕ್ಲಿಕ್ಕಿಸಿ ಸಂಭ್ರಮಿಸಿದರು.