ದಾವಣಗೆರೆ: ಅಪಘಾತ ಪ್ರಕರಣವೊಂದರಲ್ಲಿ ಬಾಕಿ ಪರಿಹಾರ ಮೊತ್ತ ನೀಡದ ಹಿನ್ನೆಲೆಯಲ್ಲಿ ನ್ಯಾಯಾಲಯದ ಆದೇಶದಂತೆ ಎರಡು ಕೆಎಸ್ಆರ್ಟಿಸಿ ಬಸ್ಗಳನ್ನು ಸೋಮವಾರ ಜಪ್ತಿ ಮಾಡಲಾಯಿತು.
ನಗರದ ಕೆಎಸ್ಆರ್ಟಿಸಿ ಬಸ್ ನಿಲ್ದಾಣದಲ್ಲಿ ಹಾವೇರಿ ಡಿಪೋಗೆ ಸೇರಿದ ಎರಡು ಬಸ್ಗಳನ್ನು ನ್ಯಾಯಾಂಗ ಇಲಾಖೆ ಸಿಬ್ಬಂದಿ ಜಪ್ತಿ ಮಾಡಿದರು.
ಅಪಘಾತದಲ್ಲಿ ಮೃತಪಟ್ಟವರ ಕುಟುಂಬಕ್ಕೆ ಕೊಡಬೇಕಿದ್ದ ಪರಿಹಾರದ ಬಾಕಿ ಮೊತ್ತ ಉಳಿಸಿಕೊಂಡಿರುವ ಸಂಸ್ಥೆಯ ಚರಾಸ್ತಿ ಜಪ್ತಿಗೆ ದಾವಣಗೆರೆ ಹೆಚ್ಚುವರಿ ಹಿರಿಯ ಸಿವಿಲ್ ಮತ್ತು ಜೆಎಂಎಫ್ಸಿ ನ್ಯಾಯಾಲಯ ಆದೇಶಿಸಿತ್ತು.
2013ರಲ್ಲಿ ತುಮಕೂರು ಟೋಲ್ ಬಳಿ ಹಾವೇರಿ ಡಿಪೋಗೆ ಸೇರಿದ ಕೆಎಸ್ಆರ್ಟಿಸಿ ಬಸ್ವೊಂದು ಡಿಕ್ಕಿ ಹೊಡೆದ ಪರಿಣಾಮ ಬೆಂಗಳೂರಿಗೆ ತೆರಳುತ್ತಿದ್ದ ಸಾಫ್ಟ್ವೇರ್ ಎಂಜಿನಿಯರ್ ಸಂಜೀವ್ ಎಂ. ಪಾಟೀಲ್ ಮೃತಪಟ್ಟಿದ್ದರು.
ಸಂಜೀವ್ ಅವರ ಪತ್ನಿ ಗೌರಿ ಪಾಟೀಲ್ ಅವರಿಗೆ ₹ 2,82,42,885 ಪರಿಹಾರ ನೀಡುವಂತೆ ಹೈಕೋರ್ಟ್ ಆದೇಶಿಸಿತ್ತು. ಆದರೆ, ಪರಿಹಾರ ಮೊತ್ತವನ್ನು ಪೂರ್ಣವಾಗಿ ನೀಡಲು ಸತಾಯಿಸುತ್ತಿರುವ ಸಂಸ್ಥೆಯು ಈವರೆಗೆ ₹2.20 ಕೋಟಿ ಮಾತ್ರ ಪಾವತಿಸಿದೆ. 2016ರ ನಂತರದ ಬಡ್ಡಿ ಮೊತ್ತ ಸೇರಿದಂತೆ ಇನ್ನೂ ₹1 ಕೋಟಿಯಷ್ಟು ಹಣವನ್ನು ಮೃತರ ವಾರಸುದಾರರಿಗೆ ಕೆಎಸ್ಆರ್ಟಿಸಿ ನೀಡಬೇಕಿದೆ ಎಂದು ಗೌರಿ ಅವರ ತಂದೆ ಕಿರುವಾಡಿ ಸೋಮಶೇಖರ್ ತಿಳಿಸಿದ್ದಾರೆ.