ದಾವಣಗೆರೆ: ನಗರದ ಬಹುತೇಕ ಸರ್ಕಾರಿ ಆಸ್ಪತ್ರೆಗಳಲ್ಲಿ ಸಾರ್ವಜನಿಕರಿಗೆ ಮೂಲಸೌಲಭ್ಯಗಳು ಇಲ್ಲ. ಕುಡಿಯುವ ನೀರು, ಶೌಚಾಲಯ, ಕುಳಿತುಕೊಳ್ಳಲು ಆಸನಗಳು, ಅರ್ಜಿ ಸಲ್ಲಿಕೆಯ ಸಾಕಷ್ಟು ಕೌಂಟರ್ಗಳು ಇಲ್ಲದೇ ನಾಗರಿಕರು ಪರಿತಪಿಸುವಂತಾಗಿದೆ.
ನಗರದ ತಹಶೀಲ್ದಾರ್ ಕಚೇರಿ, ಉಪವಿಭಾಗಾಧಿಕಾರಿ ಕಚೇರಿ, ಉಪನೋಂದಣಾಧಿಕಾರಿಗಳ ಕಚೇರಿ, ಪ್ರಾದೇಶಿಕ ಸಾರಿಗೆ ಕಚೇರಿ, ಮಹಾನಗರಪಾಲಿಕೆ, ಪರಿಶಿಷ್ಟ ಜಾತಿಹಾಗೂ ಹಿಂದುಳಿದ ವರ್ಗದವರ ನಿಗಮ, ಡೆಂಟಲ್ ಕಾಲೇಜು ಬಳಿಯ ವಾಲ್ಮೀಕಿ ನಿಗಮ, ಕಾರ್ಮಿಕರ ಇಲಾಖೆಯ ಸ್ಥಳೀಯ ಕಚೇರಿ, ಲೋಕೋಪಯೋಗಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಕಚೇರಿ, ವಾರ್ತಾ ಇಲಾಖೆಯ ಕಚೇರಿಗಳು ಸೇರಿದಂತೆ ಹಲವು ಸಾರ್ವಜನಿಕ ಕಚೇರಿಗಳಲ್ಲಿ ಕನಿಷ್ಠ ಸೌಲಭ್ಯಗಳು ಇಲ್ಲದೇ ಪರಿತಪಿಸುತ್ತಿದ್ದಾರೆ.
ಮಹಾನಗರ ಪಾಲಿಕೆ ಹಾಗೂ ಪ್ರಾದೇಶಿಕ ಸಾರಿಗೆ ಕಚೇರಿಗಳಲ್ಲಿ ಹಣಕೊಟ್ಟು ಬಳಸುವ ಶೌಚಾಲಯವಿದೆ. ಆದರೆ ಕೆಲವು ಸಲ ಅವುಗಳೂ ಮುಚ್ಚಿರುತ್ತವೆ. ನಗರದ ಜಿಲ್ಲಾಧಿಕಾರಿ ಕಚೇರಿ ಹಾಗೂ ಜಿಲ್ಲಾ ಪಂಚಾಯಿತಿ ಕಚೇರಿಗಳಲ್ಲಿ ಮಾತ್ರ ಸೌಲಭ್ಯಗಳು ಇವೆ.
ನಗರದ ತಹಶೀಲ್ದಾರ್ ಕಚೇರಿಯು ರೈತ ಭವನದ ಕಟ್ಟಡದಲ್ಲೇ ನಡೆಯುತ್ತಿದ್ದು, ಇಲ್ಲಿ ಕನಿಷ್ಠ ಸೌಲಭ್ಯಗಳು ಇಲ್ಲ. ಶೌಚಾಲಯ ಹುಡುಕಿಕೊಂಡು ಹೋಗಬೇಕಿದೆ. ಕುಡಿಯುವ ನೀರಿನ ವ್ಯವಸ್ಥೆ ಇಲ್ಲ. ಕುಳಿತುಕೊಳ್ಳಲು ಆಸನದ ವ್ಯವಸ್ಥೆ ಇಲ್ಲ. ಶಿಥಿಲ ಕಟ್ಟಡದಲ್ಲಿ ನಡೆಯುತ್ತಿದ್ದು, ಕಸವೂ ಅಲ್ಲಲ್ಲಿ ಬಿದ್ದಿರುತ್ತದೆ. ಜನಸ್ಪಂದನ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಅವರಿಗೆ ಹಲವು ರೈತರು ಮನವಿ ಮಾಡಿದರು.
ನಗರದ ಉಪವಿಭಾಗಾಧಿಕಾರಿ ಕಚೇರಿಯಲ್ಲೂ ಸಮಸ್ಯೆ ಹೇಳತೀರದು. ಪ್ರವಾಸೋದ್ಯಮ ಇಲಾಖೆಯ ಕಚೇರಿಯೂ ಅಲ್ಲಿ ಇದೆ. ನಗರದಲ್ಲಿ ಹಲವಾರು ಪ್ರತಿಭಟನೆಗಳು ನಡೆಯುತ್ತಿದ್ದು, ಮನವಿ ಬರುವ ಜನರಿಗೆ ಮೂಲಸೌಲಭ್ಯಗಳು ಇಲ್ಲ.
ನಗರದ ಶಂಕರ ವಿಹಾರ ಬಡಾವಣೆಯಲ್ಲಿರುವ ಉಪನೋಂದಣಾಧಿಕಾರಿ ಕಚೇರಿ ಮೂಲಸೌಲಭ್ಯಗಳಿಂದ ವಂಚಿತವಾಗಿದೆ. ಹಲವು ವರ್ಷಗಳ ಹಿಂದೆ ನಿರ್ಮಿಸಿರುವ ಕಟ್ಟಡವನ್ನು ಒಮ್ಮೆ ನೋಡಿದರೆ ಮೇಲ್ನೋಟಕ್ಕೆ ಉಗ್ರಾಣದಂತೆ ಕಾಣುತ್ತದೆ. ಕಚೇರಿಯಲ್ಲಿ ಜನರಿಗೆ ಕುಳಿತುಕೊಳ್ಳಲು ಆಸನಗಳೇ ಇಲ್ಲ. ಕುಡಿಯಲು ನೀರಿನ ವ್ಯವಸ್ಥೆ, ಶೌಚಾಲಯ ವ್ಯವಸ್ಥೆ ಬಲು ದೂರ. ಇನ್ನು ಕಚೇರಿಗೆ ಹೋಗುವ ರಸ್ತೆ ಕೂಡ ಸಮರ್ಪಕವಾಗಿಲ್ಲ. ಮಳೆ ಬಂದರೆ ಕೆಸರಿನ ರಸ್ತೆಯಲ್ಲಿ ಸಾಗಬೇಕು. ಸುತ್ತ ಗಿಡಗಂಟಿಗಳು ಬೆಳೆದಿವೆ. ವೃದ್ಧರು, ಮಹಿಳೆಯರು ಕೂರಲು ಸ್ಥಳವಿಲ್ಲದೆ ಮಳೆ, ಬಿಸಿಲಿನಲ್ಲಿ ನಿಲ್ಲುವ ಸ್ಥಿತಿ ಇದೆ. ಪಾರ್ಕಿಂಗ್ ಜಾಗ ಇಲ್ಲದೇ ರಸ್ತೆಯಲ್ಲೇ ವಾಹನಗಳನ್ನು ನಿಲ್ಲಿಸಬೇಕಿದೆ.
ಕೂಡಲೇ ಸರ್ಕಾರಿ ಕಚೇರಿಗಳಿಗೆ ಮೂಲಸೌಲಭ್ಯ ಕಲ್ಪಿಸಬೇಕು ಎಂಬುದು ಸಾರ್ವಜನಿಕರ ಆಗ್ರಹ.
ದಾವಣಗೆರೆಯ ಕೆಲವು ಕಚೇರಿಗಳಲ್ಲಿ ಡಿ.ಸಿ. ಜಿಲ್ಲಾ ಪಂಚಾಯಿತಿ ಬಿಟ್ಟರೆ ಬೇರೆ ಎಲ್ಲೂ ಸೌಲಭ್ಯಗಳು ಇಲ್ಲ. ವಯಸ್ಸಾದ ರೈತರು ಬರುತ್ತಾರೆ. ಮಧುಮೇಹ ಇರುತ್ತದೆ. ಆಗಾಗ್ಗೆ ಶೌಚಾಲಯಕ್ಕೆ ಹೋಗಬೇಕಿರುತ್ತದೆ. ಕೂಡಲೇ ಸರ್ಕಾರಿ ಕಚೇರಿಗಳಿಗೆ ಸೂಕ್ತ ಸೌಲಭ್ಯ ಕಲ್ಪಿಸಬೇಕು.ಬಲ್ಲೂರು ರವಿಕುಮಾರ್ ರೈತಮುಖಂಡ
ಅತಿ ಹೆಚ್ಚು ಆದಾಯ ತಂದುಕೊಡುವ ಉಪನೋಂದಣಾಧಿಕಾರಿ ಕಚೇರಿಯಲ್ಲೂ ಸಾರ್ವಜನಿಕರಿಗೆ ಶೌಚಾಲಯ ಆಸನಗಳ ವ್ಯವಸ್ಥೆ ಇಲ್ಲ. ಕೂಡಲೇ ಹೊಸ ಕಟ್ಟಡಕ್ಕೆ ಕಚೇರಿಯನ್ನು ಸ್ಥಳಾಂತರಿಸಬೇಕು ಆವರಗೆರೆಚಂದ್ರು ಕಾರ್ಮಿಕ ಮುಖಂಡ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.