ಹರಿಹರ: ಮಗು ಚಿವುಟಿ, ತೊಟ್ಟಿಲು ತೂಗುವುದು ಮಾಜಿ ಶಾಸಕ ಎಚ್.ಎಸ್.ಶಿವಶಂಕರ್ ಅವರ ಕಾಯಕವಾಗಿದೆ ಎಂದು ಶಾಸಕ ಎಸ್.ರಾಮಪ್ಪ ಟೀಕಿಸಿದರು.
ನಗರದ ದೇವಸ್ಥಾನ ರಸ್ತೆಯ ತೇರುಗಡ್ಡೆ ವೃತ್ತದಲ್ಲಿ ಸೋಮವಾರ ₹ 22 ಕೋಟಿ ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿ ಮಾತನಾಡಿದ ಅವರು, ‘ನಾಡಬಂದ್ ಷಾವಲಿ ದರ್ಗಾ ಎದುರಿನ ರಸ್ತೆ ಅಭಿವೃದ್ಧಿಗೆ ಬಿ.ಪಿ.ಹರೀಶ್ ಅಡ್ಡಿಯಾಗಿರುವುದು ಗೊತ್ತಿದ್ದರೂ ಶಿವಶಂಕರ್ ಅಲ್ಪಸಂಖ್ಯಾತರ ಓಲೈಕೆಗಾಗಿ ಮಗುವನ್ನೂ ಚಿವುಟುತ್ತಾ, ತೊಟ್ಟಿಲನ್ನೂ ತೂಗುತ್ತಿದ್ದಾರೆ’ ಎಂದು ಆರೋಪಿಸಿದರು.
ಎಚ್.ಎಸ್.ಶಿವಶಂಕರ್ ಮತ್ತು ಬಿ.ಪಿ.ಹರೀಶ್ ಏನೆಂದು ತಾಲ್ಲೂಕಿನ ಜನರಿಗೆ ತಿಳಿದಿದೆ. ಮುಂಬರುವ ಚುನಾವಣೆಯಲ್ಲಿ 2ನೇ, 3ನೇ ಸ್ಥಾನಗಳು ಅವರಿಗೆ ಖಾತ್ರಿಯಾಗಿವೆ. ತಾಲ್ಲೂಕಿನಲ್ಲಿ ಜೆಡಿಎಸ್ ಅಭ್ಯರ್ಥಿಗೆ 3ನೇ ಸ್ಥಾನವೇ ಗತಿ ಎಂದರು.
‘ಕಾಂಗ್ರೆಸ್ ಪಕ್ಷ ಸಾಗರವಿದ್ದಂತೆ. ನಾನು ನಮ್ಮ ಪಕ್ಷದ ಮುಖಂಡರ ಮನೆಗೆ ಹೋಗದೆ ಬೇರೆಯವರ ಮನೆಗೆ ಹೋಗಬೇಕಾ? ಶಿವಶಂಕರ್ ಟಿಕೆಟಿಗಾಗಿ ದೆಹಲಿಯ ಮುಖಂಡರ ಮನೆ ಬಾಗಿಲು ಕಾಯುತ್ತಿದ್ದಾರೆ ಎಂದು ಹೇಳಿದ್ದಾರೆ. ಕತ್ತೆ ಸತ್ತರೆ ಹಾಳು
ಗುಂಡಿಗೆ ಎಸೆ ಎಂಬಂತೆ, ತಾಲ್ಲೂಕಿನಲ್ಲಿ ಜೆಡಿಎಸ್ ಸ್ಥಿತಿ ಇದೆ. ಅವರನ್ನು ಬಿಟ್ಟರೆ ಜೆಡಿಎಸ್ಗೆ ಗತಿಯಿಲ್ಲ. ಇವರಿಗೆ ಜೆಡಿಎಸ್ ಪಕ್ಷ ಬಿಟ್ಟರೆ ಬೇರೆ ಗತಿ ಇಲ್ಲ ಎಂಬಂತಾಗಿದೆ’ ಎಂದು ತಿರುಗೇಟು ನೀಡಿದರು.
ನಾನು ತಾಲ್ಲೂಕಿಗೆ ಎಷ್ಟು ಅನುದಾನ ತಂದಿದ್ದೇನೆ ಎಂದು ಶೀಘ್ರದಲ್ಲಿ ಪಟ್ಟಿ ಬಿಡುಗಡೆ ಮಾಡುತ್ತೇನೆ. ಮಾಜಿ ಶಾಸಕ ಬಿ.ಪಿ. ಹರೀಶ್ ಮತ್ತು ಎಚ್.ಎಸ್.ಶಿವಶಂಕರ್ ತಮ್ಮ ಅವಧಿಯಲ್ಲಿ ಎಷ್ಟು ಅನುದಾನ ತಂದಿದ್ದಾರೆ ಎಂಬುದು ಪಟ್ಟಿ ಬಿಡುಗಡೆ ಮಾಡಲಿ ಎಂದು ಸವಾಲ್ ಹಾಕಿದರು.
ವಾರ್ಡ್ ಸದಸ್ಯ ಶಂಕರ್ ಖಟಾವ್ಕರ್ ಮಾತನಾಡಿದರು. ನಗರಸಭಾಧ್ಯಕ್ಷೆ ಶಾಹೀನಾ ದಾದಾಪೀರ್ ಹಾಗೂ ನಗರಸಭೆ ಸದಸ್ಯರು, ಅಧಿಕಾರಿಗಳಿದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.