ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಚುನಾವಣಾ ಫಲಿತಾಂಶ ಉತ್ತರವಾಗಲಿ

ಮಹಿಳೆ ಅಡುಗೆ ಮಾಡೋಕೆ ಲಾಯಕ್ಕು ಹೇಳಿಕೆಗೆ ಗಾಯತ್ರಿ ಸಿದ್ದೇಶ್ವರ ತಿರುಗೇಟು
Published 31 ಮಾರ್ಚ್ 2024, 6:15 IST
Last Updated 31 ಮಾರ್ಚ್ 2024, 6:15 IST
ಅಕ್ಷರ ಗಾತ್ರ

 ದಾವಣಗೆರೆ: ‘ಶಾಸಕ ಶಾಮನೂರು ಶಿವಶಂಕರಪ್ಪ ಹೇಳಿಕೆಗೆ ಸರಿಯಾದ ಉತ್ತರ ಕೊಡಬೇಕು ಎಂದರೆ ನನ್ನನ್ನು ಗೆಲ್ಲಿಸಬೇಕು’ ಎಂದು ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ ಮನವಿ ಮಾಡಿದರು.

ದಾವಣಗೆರೆ ನಗರದ ಜಿಲ್ಲಾ ಕ್ರೀಡಾಂಗಣ, ವಿದ್ಯಾನಗರ ಉದ್ಯಾನ ಹಾಗೂ ವಿವಿಧೆಡೆ ಮತಯಾಚಿಸಿ ಅವರು ಮಾತನಾಡಿ, ಮಹಿಳೆ ಅಡುಗೆ ಮಾಡುವುದು ಮಾತ್ರವಲ್ಲ. ಸಂಸತ್ತಿನಲ್ಲಿ ಕುಳಿತು ಅಧಿಕಾರವನ್ನು ಮಾಡುತ್ತಾರೆ, ಅಭಿವೃದ್ಧಿಯನ್ನೂ ಮಾಡುತ್ತಾರೆ ಎನ್ನುವುದನ್ನು ಸಾಬೀತುಪಡಿಸಬೇಕು. ದಾವಣಗೆರೆ ಬಿಜೆಪಿಯ ಚುನಾವಣಾ ಫಲಿತಾಂಶ ಅವರಿಗೆ ಉತ್ತರವಾಗಬೇಕು’ ಎಂದರು.

‘ನಾವು ಯಾರನ್ನೂ ಕೀಳಾಗಿ ನೋಡಬಾರದು. ಎಲ್ಲರಲ್ಲೂ ಅವರದ್ದೇ ಆದ ಶಕ್ತಿ, ಸಾಮರ್ಥ್ಯ ಇರುತ್ತದೆ. ಒನಕೆ ಒಬವ್ವ, ಕಿತ್ತೂರು ರಾಣಿ ಚನ್ನಮ್ಮ, ಝಾನ್ಸಿ ರಾಣಿ ಲಕ್ಷ್ಮಿಬಾಯಿ, ಸಾವಿತ್ರಿ ಬಾಯಿಫುಲೆ ಸೇರಿದಂತೆ ಅನೇಕ ಮಹಿಳೆಯರು ಇಂದಿಗೂ ಅವರ ಸಾಧನೆಯಿಂದ ಜೀವಂತವಾಗಿದ್ದಾರೆ. ಸಣ್ಣ ಮಕ್ಕಳಿಗೆ ಅವರ ಬಗ್ಗೆ ಕತೆಗಳನ್ನು ಹೇಳುತ್ತೇವೆ. ಅವರೆಲ್ಲ ಅಡುಗೆ ಮಾಡುವುದಕ್ಕೆ ಮಾತ್ರ ಲಾಯಕ್ಕಾಗಿದ್ದರೆ ಇತಿಹಾಸ ಪುಟಗಳಲ್ಲಿ ಅವರು ಯಾರೂ ಇರುತ್ತಿರಲಿಲ್ಲ’ ಎಂದರು.

ಜಿಲ್ಲಾ ಕ್ರೀಡಾಂಗಣದಲ್ಲಿ ಯುವಕ-ಯುವತಿಯರ ಜೊತೆ ಕ್ರಿಕೆಟ್ ಆಟವಾಡಿ, ಬೌಲಿಂಗ್ ಮಾಡಿದ ಗಾಯಿತ್ರಿ ಸಿದ್ದೇಶ್ವರ ಅವರು ಪ್ರಧಾನಿ ನರೇಂದ್ರ ನೇತೃತ್ವದ ಕೇಂದ್ರ ಸರ್ಕಾರದ ಸಾಧನೆಗಳನ್ನು ವಿವರಿಸಿದರು. ವಿದ್ಯಾನಗರದಲ್ಲಿ ವಾಯುವಿಹಾರಿಗಳ ಜೊತೆ ವಾಕ್ ಮಾಡಿ ಸಮಾಲೋಚನೆ ನಡೆಸಿದರು.

ಮಾಜಿ ಶಾಸಕ ಟಿ. ಗುರುಸಿದ್ದನಗೌಡ ನಿವಾಸಕ್ಕೆ ಭೇಟಿ ನೀಡಿ ಆರೋಗ್ಯ ವಿಚಾರಿಸಿ, ಚುನಾವಣೆ ಕಾರ್ಯತಂತ್ರದ ಬಗ್ಗೆ ಚರ್ಚಿಸಿದರು. ಮಾಜಿ ಶಾಸಕ ಬಸವರಾಜ್ ನಾಯ್ಕ್ , ರೈತ ಮೋರ್ಚಾ ರಾಜ ಉಪಾಧ್ಯಕ್ಷ ಲೋಕಿಕೆರೆ ನಾಗರಾಜ್, ಬಿಜೆಪಿ ಜಿಲ್ಲಾಧ್ಯಕ್ಷ ಎನ್.ರಾಜಶೇಖರ್, ಜಿ.ಎಸ್. ಅನಿತ್ ಕುಮಾರ್, ಬಿ.ಎಸ್.ಜಗದೀಶ್, ಲಕ್ಷ್ಮಣ್, ಪಾಲಿಕೆ ಸದಸ್ಯರಾದ ಗೀತ ದಿಳ್ಳಪ್ಪ, ವೀಣಾ ನಂಜಪ್ಪ, ಶಿವಕುಮಾರ್, ಪ್ರೇಮಮ್ಮ ನನ್ನಯ್ಯ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT