ದಾವಣಗೆರೆ: ಅಕ್ಷರ ಪ್ರೀತಿ, ಕಾವ್ಯ ಪ್ರೀತಿಯಾಗಿ ಮಾರ್ಪಾಡು ಆದಾಗ ಉತ್ತಮ ಕವಿತೆ ಹುಟ್ಟುತ್ತದೆ ಎಂದು ಪತ್ರಕರ್ತ ಬಿ.ಎನ್. ಮಲ್ಲೇಶ್ ಹೇಳಿದರು.
ಕುವೆಂಪು ಕನ್ನಡ ಭವನದಲ್ಲಿ ಭಾನುವಾರ ಚಿತ್ರದುರ್ಗದ ಸೃಷ್ಟಿ ಗ್ರಂಥಮಾಲೆ ಹಾಗೂ ದಾವಣಗೆರೆಯ ಸೋಮೇಶ್ವರ ವಿದ್ಯಾಲಯದ ಸಹಯೋಗದಲ್ಲಿ ಸಾಹಿತಿ ಹಂಶಿ ಅವರ ‘ಸಂತೆಯಲ್ಲಿ ಸಂತನ ಸುತ್ತಾಟ’ ಕಾವ್ಯ ಸಂಕಲನ ಬಿಡುಗಡೆ ಮಾಡಿ
ಅವರು ಮಾತನಾಡಿದರು.
ಅವಸರದಲ್ಲಿ ಕವಿತೆ ಹುಟ್ಟುವುದಿಲ್ಲ. ಪದಕ್ಕೆ, ಪದ ಜೋಡಿಸಿದರೆ ಕಾವ್ಯವಾಗುವುದಿಲ್ಲ. ಹಾಲು ತುಪ್ಪವಾಗುವ ರೀತಿಯಲ್ಲಿ ಮಣ್ಣು ಮಡಕೆಯಾಗುವ ರೀತಿಯಲ್ಲಿ ನಮ್ಮೊಳಗೆ ನಾವು ಬೆಂದಾಗ ಕವಿತೆ ಹುಟ್ಟುತ್ತದೆ ಎಂದು ಅವರು ವಿಶ್ಲೇಷಿಸಿದರು.
‘ನಮ್ಮ ವೈಯಕ್ತಿಕ ಅನುಭವವನ್ನು ಕವನವನ್ನಾಗಿ ಮಾಡುತ್ತೇವೆ. ನಮ್ಮ ಅನುಭವ ಓದುಗರ ಅನುಭವವಾದರೆ ಅದು ಉತ್ತಮ ಕವಿತೆಯಾಗಿರುತ್ತದೆ. ಹೂವು, ಹಣ್ಣು, ಪ್ರಕೃತಿ, ಸೂರ್ಯ, ಚಂದ್ರ ಎಂದು ಕವಿತೆ ಬರೆಯುವ ಜತೆಗೆ ಸಾಮಾಜಿಕ ತಲ್ಲಣಗಳಿಗೂ ಕವಿ ಧ್ವನಿಯಾಗಬೇಕು.
ಸಮಾಜದ ವಿದ್ಯಮಾನಗಳನ್ನು ಎದುರುಗೊಳ್ಳುವ ಕವಿ
ಶಾಶ್ವತವಾಗಿ ಉಳಿಯುತ್ತಾನೆ’ ಎಂದು ಹೇಳಿದರು.
ಸಿದ್ಧಾಂತ ಸಾಹಿತಿ ಓಂಕಾರಯ್ಯ ತವನಿಧಿ ಆಶಯ ನುಡಿಗಳನ್ನಾಡಿದರು. ವರದಿಗಾರರ ಕೂಟದ ಅಧ್ಯಕ್ಷ
ಜಿ.ಎಂ.ಆರ್. ಆರಾಧ್ಯ ಅಧ್ಯಕ್ಷತೆ ವಹಿಸಿದ್ದರು. ಕೃತಿಕಾರ ಹಂಶಿ, ಸೋಮೇಶ್ವರ ವಿದ್ಯಾಲಯದ ಕೆ.ಎಂ. ಸುರೇಶ್, ನಿವೃತ್ತ ಪ್ರಾಧ್ಯಾಪಕಿ ಡಾ.ಎಸ್.ವಿ.ಕಮಲಮ್ಮ, ಉದ್ಯಮಿ ಎನ್. ರಾಘವೇಂದ್ರ, ಕೆ.ಪಿ. ಬಸವರಾಜಪ್ಪ, ಎನ್.ಆರ್. ತಿಪ್ಪೇಸ್ವಾಮಿ, ಎನ್.ಪಿ. ನಾಗರಾಜ, ಎಚ್.ಆರ್.ಅಶೋಕರೆಡ್ಡಿ ಅವರೂ ಇದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.