ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಜಗಳೂರು: ಬಿತ್ತನೆ ಬೀಜ ಕಂಪನಿಗಳಿಗೆ ಕೋಟಿಗಟ್ಟಲೆ ಹಣ ವಂಚಿಸಿ ಪರಾರಿ

ನಕಲಿ ಆಧಾರ್ ಕಾರ್ಡ್‌ ನೀಡಿ: 20ಕ್ಕೂ ಹೆಚ್ಚು ಕಂಪನಿಗಳಿಗೆ ಮೋಸ*
Published 6 ಜೂನ್ 2024, 6:41 IST
Last Updated 6 ಜೂನ್ 2024, 6:41 IST
ಅಕ್ಷರ ಗಾತ್ರ

ಜಗಳೂರು: ಪಟ್ಟಣದಲ್ಲಿ ನಕಲಿ ಬಿತ್ತನೆ ಬೀಜ ಮಾರಾಟಗಾರನೊಬ್ಬ ಬೀಜ ಮಾರಾಟದ ನೆಪದಲ್ಲಿ 20ಕ್ಕೂ ಹೆಚ್ಚು ಕಂಪನಿಗಳಿಗೆ ಕೋಟ್ಯಂತರ ರೂಪಾಯಿ ವಂಚಿಸಿರುವ ಪ್ರಕರಣ ಬಯಲಿಗೆ ಬಂದಿದೆ.

ಪಟ್ಟಣದ ದಾವಣಗೆರೆ ರಸ್ತೆಯಲ್ಲಿ ‘ಕಿಸಾನ್ ಆಗ್ರೋ’ ಹೆಸರಿನಲ್ಲಿ ಬೀಜ ಮತ್ತು ಗೊಬ್ಬರ ವ್ಯಾಪಾರ ನಡೆಸುತ್ತಿದ್ದ ಹೊರ ರಾಜ್ಯ ಮೂಲದ ಕುಮಾರ್ ಗೌಡ ಎಂಬ ಹೆಸರಿನ ವ್ಯಕ್ತಿ ವಿವಿಧ ಬೀಜ ಕಂಪನಿಗಳ ವಿತರಕರಿಗೆ ಕೋಟಿಗಟ್ಟಲೆ ವಂಚನೆ ಮಾಡಿ ಪರಾರಿಯಾಗಿದ್ದಾನೆ.

ಮುಂಗಾರು ಹಂಗಾಮಿನಲ್ಲಿ ಬಿತ್ತನೆ ಬೀಜ ಮಾರಾಟ ಮಾಡುವ ಉದ್ದೇಶದಿಂದ ಇಲ್ಲಿನ ಮರೇನಹಳ್ಳಿ ರಸ್ತೆಯ ಲೋಕೋಪಯೋಗಿ ಕಚೇರಿ ಎದುರಿನ ಹನುಮಂತಾಪುರ ಪಕೀರ್ ಸಾಬ್ ಎಂಬುವವರಿಗೆ ಸೇರಿದ ವಾಣಿಜ್ಯ ಕಟ್ಟಡವನ್ನು ಬಾಡಿಗೆ ಪಡೆದಿದ್ದನು. ಪಯೊನಿಯರ್, ಕಾವೇರಿ, ರಾಶಿ, ಡಿಕೆಶಿ, ಅಡ್ವಾಂಟ, ಲಕ್ಷ್ಮೀ ಸೀಡ್ಸ್, ವಿ.ಎನ್.ಆರ್, ಮುಂತಾದ 20ಕ್ಕೂ ಹೆಚ್ಚು ಕಂಪನಿಗಳ ಬಿತ್ತನೆ ಬೀಜ ಮತ್ತು ಕೀಟನಾಶಕಗಳನ್ನು ರೈತರಿಗೆ ಮಾರಾಟ ಮಾಡಿದ್ದು, ಆ ಹಣವನ್ನು ಬೀಜ ಪೂರೈಕೆ ಮಾಡಿದ್ದ ಕಂಪನಿಗಳಿಗೆ ಕೊಡದೆ ರಾತ್ರೋರಾತ್ರಿ ಪಟ್ಟಣದಿಂದ ಪರಾರಿಯಾಗಿದ್ದು, ಆತಂಕಗೊಂಡ ವಿತರಕರು, ಕಂಪನಿ ಉದ್ಯೋಗಿಗಳು ಪೊಲೀಸರ ಮೊರೆ ಹೋಗಿದ್ದಾರೆ.

‘ನಾನು ಇಡೀ ಜಿಲ್ಲೆಗೆ 30 ವರ್ಷದಿಂದ ಬಾಯರ್, ಕಾವೇರಿ, ಪಯೊನಿಯರ್, ಮುಂತಾದ ಕಂಪನಿಗಳ ಈರುಳ್ಳಿ, ಮೆಕ್ಕೆಜೋಳ ಮತ್ತಿತರೆ ಬಿತ್ತನೆ ಬೀಜಗಳನ್ನು ಮಾರಾಟಗಾರರಿಗೆ ಬೀಜ ಪೂರೈಸುತ್ತಿದ್ದೇನೆ. ಜಗಳೂರಿನಲ್ಲಿ ಬೀಜ ಮಾರಾಟ ಮಾಡುವ ಕುಮಾರ್ ಗೌಡ ಎಂಬ ವ್ಯಕ್ತಿಗೆ ₹1.75 ಕೋಟಿ ಮೊತ್ತದ ಬಿತ್ತನೆ ಬೀಜ ಕೊಟ್ಟಿದ್ದೇನೆ. ನನಗೆ ಕೇವಲ ₹35 ಲಕ್ಷವನ್ನು ಕೊಟ್ಟಿದ್ದು, ಉಳಿದ ಹಣ ಕೊಡುತ್ತೇನೆ ಎಂದು ಭರವಸೆ ನೀಡಿದ್ದ. ಆದರೆ ಈಗ ಮೋಸ ಮಾಡಿ ಓಡಿ ಹೋಗಿದ್ದಾನೆ. ಅವನ ಮೂಲದ ಬಗ್ಗೆ ಹೆಚ್ಚು ತಿಳಿದಿಲ್ಲ. ನಕಲಿ ಆಧಾರದ ಕಾರ್ಡ್ ಕೊಟ್ಟು ನಮಗೆ ದಿಕ್ಕು ತಪ್ಪಿಸಿದ್ದಾನೆ. ನನಗೆ ಕನಿಷ್ಠ ₹1 ಕೋಟಿಗೂ ಹೆಚ್ಚು ವಂಚಿಸಿದ್ದಾನೆ’ ಎಂದು ದಾವಣಗೆರೆ ಮೂಲದ ವಿತರಕ ಶಿವಮೂರ್ತಿ ‘ಪ್ರಜಾವಾಣಿ’ಗೆ ತಿಳಿಸಿದರು.

ಇದೇ ರೀತಿ 20ಕ್ಕೂ ಹೆಚ್ಚು ಕಂಪನಿಗಳಿಗೆ ಸೇರಿದ ವಿತರಕರು, ಉದ್ಯೋಗಿಗಳು ಕುಮಾರ್ ಗೌಡ ಎಂಬ ವ್ಯಕ್ತಿಯನ್ನು ನಂಬಿ ಐದಾರು ಕೋಟಿ ರೂಪಾಯಿ ಮೌಲ್ಯದ ಬಿತ್ತನೆ ಬೀಜದ ದಾಸ್ತಾನನ್ನು ಕೊಟ್ಟಿದ್ದಾರೆ. ಐದಾರು ದಿನಗಳಿಂದ ಮಾರುಕಟ್ಟೆ ಬೆಲೆಗಿಂತ ಅರ್ಧದಷ್ಟು ಕಡಿಮೆ ಬೆಲೆಗೆ ತರಾತುರಿಯಲ್ಲಿ ಮಾರಾಟ ಮಾಡಿ ನಾಪತ್ತೆಯಾಗಿದ್ದಾನೆ.

ನಕಲಿ ಆಧಾರ್‌ ಸೃಷ್ಟಿಸಿ: ಹಲವು ಹೆಸರು

ಬೀಜ ಕಂಪನಿಗಳಿಗೆ ವಂಚಿಸಿ ಪರಾರಿಯಾಗಿರುವ ವ್ಯಕ್ತಿಯ ನಿಜವಾದ ಹೆಸರು ಎನ್ನುವುದು ಯಾರಿಗೂ ಮಾಹಿತಿ ಇಲ್ಲ. ನಾಲ್ಕೈದು ಆಧಾರ್ ಕಾರ್ಡ್ ಗಳನ್ನು ಮಾಡಿಸಿಕೊಂಡಿದ್ದ ವಂಚಕ, ‘ಕುಮಾರ್ ಗೌಡ’, ‘ನಿಖಿಲ್’, ‘ಸಂತೋಷ್’ ಮುಂತಾದ ಹೆಸರುಗಳಲ್ಲಿ ವಿವಿಧ ಜಿಲ್ಲೆಗಳ ವರ್ತಕರು, ವಿತರಕರೊಂದಿಗೆ ವ್ಯವಹರಿಸುತ್ತಿದ್ದ. ಸಮೀಪದ ಉದ್ದಗಟ್ಟ ಗ್ರಾಮದ ರುದ್ರೇಶ್ ಎಂಬ ರೈತನ ಹೆಸರಿನಲ್ಲಿ ಬಿತ್ತನೆ ಬೀಜ ಮಾರಾಟ ಲೈಸೆನ್ಸ್ ಪಡೆದಿದ್ದ. ಈ ಹಿಂದೆ ಆಂದ್ರಪ್ರದೇಶ ಮುಂತಾದ ರಾಜ್ಯಗಳಲ್ಲಿ ಹಲವು ವಂಚನೆ ಪ್ರಕರಣಗಳು ಈತನ ವಿರುದ್ಧ ದಾಖಲಾಗಿದ್ದವು ಎನ್ನಲಾಗಿದೆ.

ಕಂಪನಿಗಳಿಗೆ ಮೋಸ ಮಾಡಿ ಪರಾರಿಯಾದ ಘಟನೆ ತಿಳಿಯುತ್ತಿದ್ದಂತೆ ಮರೇನಹಳ್ಳಿ ರಸ್ತೆಯಲ್ಲಿರುವ ಮಳಿಗೆಗೆ ಸಾರ್ವಜನಿಕರು, ರೈತರು, ವರ್ತಕರು, ವಿತರಕರು ಜಮಾಯಿಸಿದ್ದರು. ಪೊಲೀಸರು ರಾತ್ರಿ ಸಮಯದಲ್ಲಿ ಮಳಿಗೆ ತೆರೆದು ಮಾರಾಟವಾಗದೇ ಉಳಿದಿರುವ ಬಿತ್ತನೆ ಬೀಜ ಮತ್ತು ಕೀಟನಾಶಕಗಳನ್ನು ವಿವಿಧ ಕಂಪನಿಯ ವಿತರಕರಿಗೆ ತೆಗೆದುಕೊಂಡು ಹೋಗಲು ಅವಕಾಶ ಕಲ್ಪಿಸಿದರು.

‘ವಂಚನೆ ಘಟನೆ ಬಗ್ಗೆ 17 ವಿತರಕರು, ಬಿತ್ತನೆ ಬೀಜ ಕೊಟ್ಟಿರುವವರು ಓಡಿ ಹೋಗಿರುವ ವ್ಯಕ್ತಿಯ ವಿರುದ್ಧ ಕೇವಲ ದೂರು ಅರ್ಜಿ ನೀಡಿದ್ದಾರೆ. ರೈತರಿಗೆ ಯಾವುದೇ ವಂಚನೆಯಾಗಿಲ್ಲ. ವಂಚನೆ ಘಟನೆ ಬಗ್ಗೆ ಯಾವುದೇ ಮೊಕದ್ದಮೆ ದಾಖಲಾಗಿಲ್ಲ’ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT