ದಾವಣಗೆರೆ: ಬಿಸಿಯೂಟ ತಯಾರಿಸುವ ಅಡುಗೆ ಸಿಬ್ಬಂದಿಗೆ ಮೂರು ತಿಂಗಳ ವೇತನ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿ ರಾಜ್ಯ ಅಕ್ಷರ ದಾಸೋಹ ಬಿಸಿಯೂಟ ತಯಾರಕರ ಫೆಡರೇಷನ್ ಜಿಲ್ಲಾ ಸಮಿತಿ ಪದಾಧಿಕಾರಿಗಳು ಜಯದೇವ ವೃತ್ತದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿದರು.
‘ರಾಜ್ಯದಲ್ಲಿ ಬಿಸಿಯೂಟ ಉಪಹಾರ ಯೋಜನೆಯಲ್ಲಿ 1.18 ಲಕ್ಷ ಮಂದಿ ಬಡ ಮಹಿಳೆಯರು 17 ವರ್ಷಗಳಿಂದಲೂ ಸೇವೆ ಸಲ್ಲಿಸುತ್ತಿದ್ದಾರೆ. ಮುಖ್ಯ ಅಡುಗೆಯವರಿಗೆ ಮಾಸಿಕ ₹2700 ಹಾಗೂ ಇತರೆ ಸಿಬ್ಬಂದಿಗೆ ಮಾಸಿಕ ₹2,600 ವೇತನವಿದೆ. ಇದರಲ್ಲಿ ಕೇಂದ್ರ ಸರ್ಕಾರ ಕೇವಲ ₹600 ಮಾತ್ರ ನೀಡುತ್ತಿದೆ. ಉಳಿದ ಹಣವನ್ನು ರಾಜ್ಯ ಸರ್ಕಾರವೇ ಭರಿಸುತ್ತಿದೆ. ಬಿಸಿಯೂಟ ತಯಾರಕರು ಕನಿಷ್ಠ ವೇತನ ಹಾಗೂ ಸಾಮಾಜಿಕ ಭದ್ರತಾ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ. ಹಲವು ಹೋರಾಟಗಳನ್ನು ನಡೆಸಿದರೂ ನ್ಯಾಯಯುತ ಸೌಲಭ್ಯಗಳು ದೊರಕುತ್ತಿಲ್ಲ’ಎಂದು ಪ್ರತಿಭಟನಕಾರರು ಆರೋಪಿಸಿದರು.
‘ಕಳೆದ ಜನವರಿಯಲ್ಲಿ ಅಹೋರಾತ್ರಿ ಧರಣಿ ನಡೆಸಿದ ಸಂದರ್ಭ ಬಜೆಟ್ನಲ್ಲಿ ವೇತನ ಹೆಚ್ಚಿಸುವುದಾಗಿ ಭರವಸೆ ನೀಡಿದ್ದರೂ ಕಾರ್ಯಗತವಾಗಿಲ್ಲ. ಪ್ರಸ್ತುತ ಕೋವಿಡ್ -19 ನಿಂದಾಗಿ ಬಿಸಿಯೂಟ ತಯಾರಿಕಾ ಸಿಬ್ಬಂದಿ ಬಲಿಪಶುಗಳಾಗಿದ್ದಾರೆ. ಕೂಲಿಯೂ ಇಲ್ಲದೇ ಅನ್ನವೂ ಇಲ್ಲದೇ ಕಷ್ಟದಲ್ಲಿ ಜೀವನ ಸಾಗಿಸುತ್ತಿದ್ದಾರೆ. ಅಸಂಘಟಿತ ವಲಯದ ಹಲವು ವರ್ಗಗಳಿಗೆ ರಾಜ್ಯ ಸರ್ಕಾರದಿಂದ ₹5 ಸಾವಿರ ಪರಿಹಾರ ನೀಡಿರುವುದು ಉತ್ತಮ ಕಾರ್ಯ. ಅದರಂತೆ ಬಿಸಿಯೂಟ ಸಿಬ್ಬಂದಿಗೆ ಪರಿಹಾರ ನೀಡಬೇಕು’ ಎಂದು ಪ್ರತಿಭಟನಾ ನಿರತರು ರಾಜ್ಯ ಸರ್ಕಾರವನ್ನು ಒತ್ತಾಯಿಸಿದರು.
ಬಿಸಿಯೂಟ ಅಡುಗೆ ಸಿಬ್ಬಂದಿಗೆ ಪ್ರತಿವರ್ಷ ಏಪ್ರಿಲ್ ಹಾಗೂ ಮೇ ತಿಂಗಳ ಬೇಸಿಗೆ ರಜೆ ಪ್ರಯುಕ್ತ ಸಂಭಾವನೆ ಸಿಗುವುದಿಲ್ಲ. ಪ್ರಸ್ತುತ ಪರಿಸ್ಥಿತಿಯಲ್ಲಿ ಜೂನ್, ಜುಲೈ ತಿಂಗಳಿನಲ್ಲಿಯೂ ಶಾಲೆಗಳು ಪ್ರಾರಂಭವಾಗುವುದಿಲ್ಲ. ಆದ್ದರಿಂದ 3 ತಿಂಗಳ ಸಂಭಾವನೆಯನ್ನು ಪರಿಹಾರ ಧನವಾಗಿ ನೀಡಬೇಕೆಂದು ಮನವಿ ಮಾಡಿದರು.