ಹುಬ್ಬಳ್ಳಿ: ನಗರದ ಭೈರಿದೇವರಕೊಪ್ಪದ ಸಂಗೊಳ್ಳಿ ರಾಯಣ್ಣ ನಗರ ಹಾಗೂ ವಿಜಯನಗರದ ರೆವೆನ್ಯೂ ಕಾಲೊನಿಯಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ನೂತನ ವಿದ್ಯಾರ್ಥಿನಿಲಯಗಳನ್ನು ಶಾಸಕ ಜಗದೀಶ ಶೆಟ್ಟರ್ ಮಂಗಳವಾರ ಉದ್ಘಾಟಿಸಿದರು.
ಬಳಿಕ ಮಾತನಾಡಿದ ಅವರು, ‘ವಿದ್ಯಾರ್ಥಿಗಳು ಸರ್ಕಾರ ನಿರ್ಮಿಸಿರುವ ಹಾಸ್ಟೆಲ್ಗಳ ಪ್ರಯೋಜನ ಪಡೆದುಕೊಂಡು ಚೆನ್ನಾಗಿ ಓದಬೇಕು. ಉತ್ತಮ ಭವಿಷ್ಯ ರೂಪಿಸಿಕೊಂಡು ತಂದೆ–ತಾಯಿ, ಗುರುಗಳಿಗೆ ಗೌರವ ತರಬೇಕು. ಆಗ, ಸರ್ಕಾರಿ ಸೌಲಭ್ಯಗಳಿಗೆ ಸಾರ್ಥಕತೆ ಬರಲಿದೆ’ ಎಂದು ಹೇಳಿದರು.
ಹಾಸ್ಟೆಲ್ನ ಕೊಠಡಿ ಹಾಗೂ ಭೋಕನಾಲಯ ಪರಿಶೀಲಿಸಿದ ಶೆಟ್ಟರ್, ಸೌಲಭ್ಯಗಳ ಕುರಿತು ವಿದ್ಯಾರ್ಥಿನಿಯರು ಹಾಗೂ ಅಧಿಕಾರಿಗಳಿಂದ ಮಾಹಿತಿ ಪಡೆದರು. ಸಂಗೊಳ್ಳಿ ರಾಯಣ್ಣ ನಗರದಲ್ಲಿ ₹3 ಕೋಟಿ ವೆಚ್ಚದಲ್ಲಿ ಹಾಗೂ ರೆವೆನ್ಯೂ ಕಾಲೊನಿಯಲ್ಲಿ ₹2.75 ಕೋಟಿ ವೆಚ್ಚದಲ್ಲಿ ವಿದ್ಯಾರ್ಥಿನಿಲಯಗಳನ್ನು ನಿರ್ಮಾಣ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದರು.
ಹುಡಾ ಅಧ್ಯಕ್ಷ ನಾಗೇಶ ಕಲಬುರ್ಗಿ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಸರೋಜಾ ಹಳಕಟ್ಟಿ, ಇಲಾಖೆಯ ತಾಲ್ಲೂಕು ಕಲ್ಯಾಣಾಧಿಕಾರಿ ಚಂದ್ರಶೇಖರ ಕರವೀರಮಠ, ಮಹಾನಗರ ಪಾಲಿಕೆ ಸದಸ್ಯರಾದ ಸಂತೋಷ ಚವ್ಹಾಣ, ಎಂ.ಬಿ. ಗುಂಡೂರು ಇದ್ದರು.