ದಾವಣಗೆರೆ: ಕೆಪಿಸಿಸಿ ಮಾಧ್ಯಮ ವಿಶ್ಲೇಷಕ ಡಿ. ಬಸವರಾಜ್ ಅವರಿಗೆ ವೀರ ಸಾವರಕರ್ ಕುರಿತ ಪುಸ್ತಕವನ್ನು ಅಂಚೆ ಮೂಲಕ ಕಳುಹಿಸಿರುವ ಅನಾಮಧೇಯ ವ್ಯಕ್ತಿಯೊಬ್ಬ ಕೊಲೆ ಮಾಡುವುದಾಗಿ ಬೆದರಿಕೆಯೊಡ್ಡಿದ್ದಾನೆ.
‘ಸಾವರಕರ್ಗೆ ಭಾರತರತ್ನ ನೀಡಬಾರದು ಎಂಬ ಹೇಳಿಕೆ ಹಿಂಪಡೆಯಬೇಕು. ಇದು ಕೊನೆಯ ಪತ್ರ. ಸಾವರ್ಕರ್ ಜನ್ಮದಿನವಾದ ಮೇ 28ರೊಳಗೆ ಕ್ಷಮೆ ಕೇಳಬೇಕು. ಇಲ್ಲದಿದ್ದರೆ ಜೀವ ತೆಗೆಯುತ್ತೇನೆ’ ಎಂದು ಎಚ್ಚರಿಸಲಾಗಿದೆ. ಈ ಕುರಿತು ಬಸವರಾಜ್ ಅವರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ದೂರು ನೀಡಿದ್ದಾರೆ.
‘ಪಕ್ಷಕ್ಕಾಗಿ ಪ್ರಾಣತ್ಯಾಗಕ್ಕೆ ಸಿದ್ಧ. ಕ್ಷಮೆ ಕೇಳುವ ಪ್ರಶ್ನೆಯೇ ಇಲ್ಲ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಪಕ್ಷದ ಮುಖಂಡರಾದ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಅವರ ಗಮನಕ್ಕೂ ಈ ಬಗ್ಗೆ ತಂದಿದ್ದೇನೆ’ ಎಂದು ಬಸವರಾಜ್ ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
‘ಒಬ್ಬನೇ ಎರಡು ಬಾರಿ ದೂರವಾಣಿ ಮೂಲಕ ಹಾಗೂ ನಾಲ್ಕು ಬಾರಿ ಪತ್ರದ ಮೂಲಕ ಬೆದರಿಕೆ ಒಡ್ಡಿದ್ದಾನೆ’ ಎಂದು ಅವರು ಮಾಹಿತಿ ನೀಡಿದರು.