ಹೊನ್ನಾಳಿ: ‘ಪ್ರಧಾನಿ ನರೇಂದ್ರ ಮೋದಿಗೆ ಸರಿಸಮಾನವಾದ ನಾಯಕತ್ವ ಕಾಂಗ್ರೆಸ್ ಪಕ್ಷದಲ್ಲಿ ಇಲ್ಲ. ಭಾರತ ವಿಶ್ವದಲ್ಲಿ ಅಗ್ರಸ್ಥಾನಗಳಿಸಬೇಕಾದರೆ ಬಿಜೆಪಿ ಅಧಿಕಾರಕ್ಕೆ ಬರಬೇಕು. ಅದಕ್ಕೆ ಬಿಜೆಪಿಗೆ ಮತ ಹಾಕಬೇಕು’ ಎಂದು ದಾವಣಗೆರೆ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ ಮನವಿ ಮಾಡಿದರು.
ತಾಲ್ಲೂಕಿನ ಬನ್ನಿಕೋಡು, ಮುಕ್ತೇನಹಳ್ಳಿ, ಯಕ್ಕನಹಳ್ಳಿ ಕುಂದೂರು, ಕೂಲಂಬಿ, ಕುಂಬಳೂರು, ತರಗನಹಳ್ಳಿ ಸೇರಿದಂತೆ ಹಲವು ಗ್ರಾಮಗಳಲ್ಲಿ ಬುಧವಾರ ಮತಯಾಚಿಸಿ ಮಾತನಾಡಿದರು.
‘ಮಾಜಿ ಸಂಸದ ಜಿ. ಮಲ್ಲಿಕಾರ್ಜುನಪ್ಪ ಅವರು ಪ್ರತಿ ಗ್ರಾಮಗಳಿಗೆ ಖುದ್ದು ಭೇಟಿ ನೀಡಿ ಗ್ರಾಮೀಣ ಜನರ ಸಮಸ್ಯೆಗಳನ್ನು ಆಲಿಸಿ, ಜನರಿಗೆ ಸರ್ಕಾರದ ಸೌಲಭ್ಯಗಳನ್ನು ಹೇಗೆ ಒದಗಿಸಿಕೊಡಬಹುದು ಎಂದು ತೋರಿಸಿಕೊಟ್ಟಿದ್ದರು. ನಂತರ ಅದೇ ಹಾದಿಯಲ್ಲಿ ಅವರ ಮಗ ಜಿ.ಎಂ. ಸಿದ್ದೇಶ್ವರ ಕೂಡಾ ತಮ್ಮ ತಂದೆಯ ಮಾರ್ಗದಲ್ಲಿ ನಡೆದಿದ್ದರು. ಜನರ ಸಮಸ್ಯೆಗಳಿಗೆ ಸ್ಪಂದಿಸಿ ಕೆಲಸ ಮಾಡಿದ್ದರು. ಇದೀಗ ಪಕ್ಷ ನನಗೆ ಟಿಕೆಟ್ ನೀಡಿದ್ದು ನಾನೂ ಸಂಸದೆಯಾಗಿ ಆಯ್ಕೆಯಾದರೆ ಜನರ ಒಟ್ಟಿಗೆ ಇದ್ದು ಸಮಸ್ಯೆಗಳಿಗೆ ಸ್ಪಂದಿಸುತ್ತೇನೆ’ ಎಂದು ಹೇಳಿದರು.
‘ಹೊನ್ನಾಳಿ ಕ್ಷೇತ್ರದ ಜನರು ಆಶೀರ್ವದಿಸಿದರೆ ಮುಂದಿನ ದಿನಗಳಲ್ಲಿ ಹೊನ್ನಾಳಿಯಲ್ಲಿಯೇ ಸಂಸದರ ಜನಸಂಪರ್ಕ ಕಚೇರಿ ತೆರೆದು ಮಾಜಿ ಸಚಿವರಾದ ಎಂ.ಪಿ.ರೇಣುಕಾಚಾರ್ಯ ಸೇರಿದಂತೆ ಹಿರಿಯ ಮುಖಂಡರ ಮಾರ್ಗದರ್ಶನದಲ್ಲಿ ಕೆಲಸ ಮಾಡುತ್ತೇನೆ. ನೀವು ನೀಡುವ ಒಂದೊಂದು ಮತವೂ ದೇಶದ ಬದಲಾವಣೆ, ರಕ್ಷಣೆ, ಸುಭದ್ರತೆಗೆ ಅಡಿಪಾಯವಾಗುತ್ತದೆ’ ಎಂದರು.
‘ಜಿ.ಎಂ.ಸಿದ್ದೇಶ್ವರ ಅವರು ನನ್ನ ಹಿರಿಯ ಸಹೋದರನಿದ್ದಂತೆ. ಅವರ ಪತ್ನಿ ಸಹೋದರಿ ಗಾಯತ್ರಿ ಸಿದ್ದೇಶ್ವರ ಅವರನ್ನು ಗೆಲ್ಲಿಸುವುದೇ ಪ್ರತಿಯೊಬ್ಬ ಮತದಾರರ ಕಾರ್ಯಸೂಚಿಯಾಗಬೇಕು. ನರೇಂದ್ರ ಮೋದಿಯವರು ಮತ್ತೆ ಪ್ರಧಾನಿಯಾಗಬೇಕೆಂಬುದೇ ಪ್ರತಿಯೊಬ್ಬ ಮತದಾರರ ಗುರಿಯಾಗಿದೆ’ ಎಂದು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಹೇಳಿದರು.
6ಇಪಿ : ಹೊನ್ನಾಳಿ ತಾಲ್ಲೂಕಿನ ತರಗನಹಳ್ಳಿ ಗ್ರಾಮದಲ್ಲಿ ಮಾಜಿ ಸಚಿವ ಎಂ.ಪಿ.ರೇಣಕಾಚಾರ್ಯ ನೇತೃತ್ವದಲ್ಲಿ ಲೋಕಸಭಾ ಚುನಾವಣೆ ಬಿಜೆಪಿ ಅಭ್ಯರ್ಧಿ ಗಾಯತ್ರಿ ಸಿದ್ದೇಶ್ವರ್ ಅವರು ಮತಯಾಚನೆ ಮಾಡಿದರು.