ಚನ್ನಗಿರಿ: ತಾಲ್ಲೂಕಿನ ಮಾದಾಪುರ ಗ್ರಾಮದಲ್ಲಿ ಬುಧವಾರ ಸಂಜೆ ಅಡಿಕೆ ಹಾಳೆ ತಟ್ಟೆ ತಯಾರಿಕಾ ಘಟಕಕ್ಕೆ ಆಕಸ್ಮಿಕವಾಗಿ ಬೆಂಕಿ ತಗುಲಿ ಅಪಾರ ನಷ್ಟ ಉಂಟಾಗಿದೆ.
ಗ್ರಾಮದ ಗಂಗಾಧರ ಅವರು ಅಡಿಕೆ ಹಾಳೆ ತಟ್ಟೆ ತಯಾರಿಕಾ ಘಟಕ ನಡೆಸುತ್ತಿದ್ದು, ಆಕಸ್ಮಿಕವಾಗಿ ಬೆಂಕಿ ಬಿದ್ದಿದೆ. ಘಟಕದಲ್ಲಿನ ವಸ್ತುಗಳಿಗೆ ಹಾನಿಯಾಗಿದ್ದು, ₹ 20 ಲಕ್ಷ ಮೌಲ್ಯದ ಉಪಕರಣಗಳು, ಅಡಿಕೆ ತಟ್ಟೆಗಳು ಸುಟ್ಟಿವೆ.
ಅಡಿಕೆ ಹಾಳೆ ಇದ್ದ ಕಾರಣ ಏಕಾಏಕಿ ಬೆಂಕಿಯ ಜ್ವಾಲೆಗಳು ಎಲ್ಲೆಡೆ ವ್ಯಾಪಿಸಿದ್ದು, ಬೆಂಕಿ ನಂದಿಸಲು ಅಗ್ನಿ ಶಾಮಕ ದಳದ ಸಿಬ್ಬಂದಿ ಹರಸಾಹಸಪಟ್ಟರು. ಚನ್ನಗಿರಿಯ 2, ದಾವಣಗೆರೆಯ 1 ಹಾಗೂ ಹೊಳಲ್ಕೆರೆಯಿಂದ 1 ಅಗ್ನಿ ಶಾಮಕ ವಾಹನಗಳು ಬಂದು ಕಾರ್ಯಾಚರಣೆ ನಡೆಸಿದವು.
ದಾವಣಗೆರೆಯ ಅಗ್ನಿ ಶಾಮಕ ಅಧಿಕಾರಿ ಪುಟ್ಟಸ್ವಾಮಿ ಹಾಗೂ ಚನ್ನಗಿರಿಯ ಸಹಾಯಕ ಅಗ್ನಿ ಶಾಮಕ ಅಧಿಕಾರಿ ಕುಮಾರ್ ನೇತೃತ್ವದಲ್ಲಿ ಸಿಬ್ಬಂದಿ ಕಾರ್ಯಾಚರಣೆ ನಡೆಸಿದರು.