ದಾವಣಗೆರೆ: ಕೊರೊನಾ ನಿಯಂತ್ರಿಸಲು ಆರೋಗ್ಯ ವ್ಯವಸ್ಥೆಯನ್ನು ಬಲಪಡಿಸಬೇಕು ಎಂದು ಒತ್ತಾಯಿಸಿ ಸೋಷಲಿಸ್ಟ್ ಯೂನಿಟಿ ಸೆಂಟರ್ ಆಫ್ ಇಂಡಿಯಾ (ಕಮ್ಯೂನಿಸ್ಟ್) ಸೇರಿ ಎಲ್ಲ ಎಡಪಕ್ಷಗಳಿಂದ ಆನ್ಲೈನ್ ಜನಾಂದೋಲನ ನಡೆಯಿತು.
ನಗರಗಳ ಎಲ್ಲ ವಾರ್ಡ್ಗಳಲ್ಲಿ, ಪಂಚಾಯಿತಿಗಳಲ್ಲಿ ಆಸ್ಪತ್ರೆಗಳನ್ನು ನಿರ್ಮಿಸಬೇಕು. ಎಲ್ಲ ಆಸ್ಪತ್ರೆಗಳಿಗೆ ಅವಶ್ಯಕ ಸಂಖ್ಯೆಯ ಹಾಸಿಗೆಗಳು, ವೈದ್ಯರು, ದಾದಿಯರು, ವೈದ್ಯಕೀಯ ಸಿಬ್ಬಂದಿಗಳನ್ನು ಒದಗಿಸಬೇಕು. ಆಮ್ಲಜನಕ, ವೆಂಟಿಲೇಟರ್, ಔಷಧಿಗಳ ಉಚಿತ ಸರಬರಾಜು ಇರಬೇಕು. ಎಲ್ಲ ಸೈನಿಕರ ಆಸ್ಪತ್ರೆಗಳನ್ನು ನಾಗರಿಕರ ಚಿಕಿತ್ಸೆಗೆ ತೆರೆದಿಡಬೇಕು ಎಂದು ಆಗ್ರಹಿಸಲಾಯಿತು.
ಎಲ್ಲರಿಗೂ ಲಸಿಕೆಯನ್ನು ಉಚಿತವಾಗಿ ನೀಡಬೇಕು. ಸಾರ್ವಜ ನಿಕರ ತೆರಿಗೆಯಲ್ಲಿ ಸಂಬಳ ಪಡೆಯುವ ರಾಷ್ಟ್ರಪತಿ, ಉಪರಾಷ್ಟ್ರಪತಿ, ಕೇಂದ್ರ ಮತ್ತು ಎಲ್ಲಾ ರಾಜ್ಯಸಚಿವರು, ಸಂಸದರು ಮತ್ತು ಶಾಸಕರು ತಮ್ಮ ಒಂದು ವರ್ಷದ ಸಂಬಳವನ್ನು ನೀಡಬೇಕು. ಪಿಎಂ ಕೇರ್ಸ್ ಫಂಡಿನ ಪೂರ್ಣ ಮೊತ್ತವನ್ನು ಈ ಉದ್ದೇಶಕ್ಕಾಗಿ ಬಳಸಬೇಕು. ಶಿಕ್ಷಣ ಹೊರತುಪಡಿಸಿ, ಉಳಿದ ಕ್ಷೇತ್ರಗಳ ಬಜೆಟನ್ನು ಕಡಿತಗೊಳಿಸಿ, ಆರೋಗ್ಯ ಬಜೆಟನ್ನು ಹೆಚ್ಚಿಸಬೇಕು. ಈ ಮೂಲಕ ಸಂಗ್ರಹವಾಗುವ ಹಣವನ್ನು ಉದ್ಯೋಗ ಕಳೆದುಕೊಂಡ ಕಾರ್ಮಿಕರಿಗೆ, ನಿರುದ್ಯೋಗಿಗಳಿಗೆ ಮತ್ತು ಬಡವರಿಗೆ ಆರ್ಥಿಕ ನೆರವು ನೀಡಲು ಬಳಸಬೇಕು ಎಂದು ಒತ್ತಾಯಿಸಲಾಯಿತು.