ಜಗಳೂರು: ತಾಲ್ಲೂಕಿನ ದೇವಿಕೆರೆ ಗ್ರಾಮ ಪಂಚಾಯಿತಿಯಲ್ಲಿ ಕರ್ತವ್ಯಕ್ಕೆ ಹಾಜರಾಗಲು ಬಂದ ವೇಳೆ ಕೆಲವರು ಅಡ್ಡಿಪಡಿಸಿದ್ದರಿಂದ ಇಲ್ಲಿನ ಅಭಿವೃದ್ಧಿ ಅಧಿಕಾರಿ ಗಾಯತ್ರಿ ಅವರು ಪೊಲೀಸರ ರಕ್ಷಣೆಯಲ್ಲಿ ಕರ್ತವ್ಯಕ್ಕೆ ಹಾಜರಾದರು.
‘ಗಾಯತ್ರಿ ಅವರು ಪ್ರಭಾರಿಯಾಗಿ ದೇವಿಕೆರೆ ಗ್ರಾಮ ಪಂಚಾಯಿತಿಗೆ ಕರ್ತವ್ಯಕ್ಕೆ ವರದಿ ಮಾಡಿಕೊಳ್ಳಲು ಡಿಸೆಂಬರ್ 2ರಂದು ಹೋಗಿದ್ದ ಸಂದರ್ಭ ಪಂಚಾಯಿತಿಯಲ್ಲಿ ಕೆಲವರು ‘ನೀವು ನಮ್ಮ ಪಂಚಾಯಿತಿಗೆ ಬರುವುದು ಬೇಡ. ನಮ್ಮ ಒಪ್ಪಿಗೆ ಇಲ್ಲದೆ ಇಲ್ಲಿಗೆ ಹೇಗೆ ಬಂದಿದ್ದೀರಿ. ವಾಪಸ್ ಹೋಗಿ’ ಎಂದು ಹೇಳಿದ್ದರಿಂದ ವಾಪಸ್ ಬಂದಿದ್ದರು.
ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಯಿಂದ ಕರ್ತವ್ಯದ ಆದೇಶ ಪಡೆದು, ಪೊಲೀಸ್ ರಕ್ಷಣೆಯಲ್ಲಿ ಗುರುವಾರ ಪಂಚಾಯಿತಿ ಕಚೇರಿಗೆ ತೆರಳಿ ಕರ್ತವ್ಯಕ್ಕೆ ಹಾಜರಾಗಿದ್ದಾರೆ. ಬಿಳಿಚೋಡು ಪೊಲೀಸ್ ಠಾಣೆಯ ಪಿಎಸ್ಐ ಉಮೇಶ್ ಬಾಬು ಅವರ ರಕ್ಷಣೆಯಲ್ಲಿ ಕಚೇರಿಗೆ ಹೋಗಿದ್ದಾರೆ.
‘ಕಚೇರಿಗೆ ಹೋದ ಸಂದರ್ಭದಲ್ಲಿ ಹಾಜರಾತಿ ಪುಸ್ತಕ ನೀಡಲಿಲ್ಲ. ಈ ಹಿನ್ನೆಲೆಯಲ್ಲಿ ಇಂದಿನಿಂದ ಕರ್ತವ್ಯಕ್ಕೆ ಹಾಜರಾಗಿದ್ದೇನೆ’ ಎಂದು ಕಚೇರಿಯ ಗೋಡೆಯ ಮೇಲೆ ಬರೆದು ಹಿಂದಿರುಗಿದ್ದೇನೆ’ ಪಿಡಿಒ ಗಾಯತ್ರಿ ಸುದ್ದಿಗಾರರಿಗೆ ತಿಳಿಸಿದರು.