ಮಲೇಬೆನ್ನೂರು: ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಜನಪರ ಕಾರ್ಯಕ್ರಮ ರೂಪಿಸಿ ಸಮರ್ಪಕವಾಗಿ ಅನುಷ್ಠಾನಗೊಳಿಸಿ ಸಮಾಜ ಪರಿವರ್ತನೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ ಎಂದು ಶಾಸಕ ಎಸ್. ರಾಮಪ್ಪ ಹೇಳಿದರು.
ಸಮೀಪದ ಕುಣಿಬೆಳಕೆರೆ ಗ್ರಾಮದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ದೇವರಬೆಳೆಕೆರೆ ವಲಯ ಮಟ್ಟದ ಒಕ್ಕೂಟಗಳ ಪದಗ್ರಹಣ ಹಾಗೂ ಸಾಮೂಹಿಕ ಸತ್ಯನಾರಾಯಣ ಪೂಜೆ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.
ಗ್ರಾಮೀಣ ಪ್ರದೇಶದ ಸರ್ವತೋಮುಖ ಅಭಿವೃದ್ಧಿಗೆ ಯೋಜನೆ ರೂಪಿಸಿರುವ ಡಾ. ವೀರೇಂದ್ರ ಹೆಗ್ಗಡೆ ಪರಿಶ್ರಮ ಸಾರ್ಥಕವಾಗಿದೆ. ಸರ್ಕಾರಿ ಯೋಜನೆಗಳಿಗಿಂತ ಉತ್ತಮ ರೀತಿ ಅನುಷ್ಠಾನ ಮಾಡಲಾಗಿದೆ ಎಂದರು.
ಧರ್ಮಸ್ಥಳ ಕ್ಷೇತ್ರ ಅನ್ನ, ಜ್ಞಾನ, ನ್ಯಾಯದಾನ ಮಾಡುವ ಮೂಲಕ ಧರ್ಮಭೂಮಿಯಾಗಿದೆ. ಮಹಿಳೆಯರು, ಯುವಕರಿಗೆ ಹಲವಾರು ಯೋಜನೆ ಜಾರಿಗೊಳಿಸಿದೆ. ನಾಗರಿಕರನ್ನು ಒಗ್ಗೂಡಿಸಿ ಸಮಾಜದಲ್ಲಿ ಸಾಮರಸ್ಯ ಮೂಡಿಸಿದೆ ಎಂದು ವ್ಯಂಗ್ಯಚಿತ್ರ ಕಲಾವಿದ ಎಚ್.ಬಿ. ಮಂಜುನಾಥ್ ಹೇಳಿದರು.
ಎ.ಎಚ್. ಬಸವರಾಜಪ್ಪ ಅಧ್ಯಕ್ಷತೆ ವಹಿಸಿದ್ದರು. ರಾಜ್ಯ ಪ್ರಶಸ್ತಿ ಪುರಸ್ಕೃತ ಕೃಷಿಕ ವೆಂಕಟರಾಮಾಂಜನೇಯ ಅವರನ್ನು ಸನ್ಮಾನಿಸಲಾಯಿತು.
ಪ್ರಗತಿಬಂಧು ಒಕ್ಕೂಟಗಳ ನೂತನ ಪದಾಧಿಕಾರಿಗಳು ಪದಗ್ರಹಣ ಮಾಡಿದರು.
ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪಾರಮ್ಮ, ತಾಲ್ಲೂಕು ಪಂಚಾಯಿತಿ ಸದಸ್ಯ ಎನ್.ಪಿ. ಬಸವಲಿಂಗಪ್ಪ, ವೀರಭದ್ರಪ್ಪ, ಜಿ.ಸಿ. ಮಹಾಂತೇಶ್, ಭಾಗ್ಯ ಲಕ್ಷ್ಮೀ, ಯೋಜನೆ ಜಿಲ್ಲಾ ನಿರ್ದೇಶಕ ಜಯಂತ್ ಪೂಜಾರಿ, ಬಿ.ಬಿ. ಅಶೋಕ್, ಶೇಖರಪ್ಪ, ಪ್ರಗತಿಬಂಧು ಒಕ್ಕೂಟಗಳ ಸದಸ್ಯರು ಇದ್ದರು.