ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಸನ್ನಾನಂದ ಶ್ರೀಗಳಿಂದ ಸರ್ಕಾರವನ್ನು ಎಚ್ಚರಿಸುವ ಕೆಲಸ: ಕುಮಾರಸ್ವಾಮಿ

Last Updated 9 ಫೆಬ್ರುವರಿ 2020, 14:54 IST
ಅಕ್ಷರ ಗಾತ್ರ

ಹರಿಹರ: ವೈಯಕ್ತಿಕ ಸ್ವಾರ್ಥಕ್ಕಾಗಿ ಅಲ್ಲ, ಸಮಾಜದ ಏಳಿಗೆಗಾಗಿ ಸರ್ಕಾರವನ್ನು ಎಚ್ಚರಿಸುವ ಕೆಲಸವನ್ನು ವಾಲ್ಮೀಕಿ ಪೀಠದ ಪ್ರಸನ್ನಾನಂದ ಸ್ವಾಮೀಜಿ ನಿರಂತರ ಮಾಡಿಕೊಂಡು ಬಂದಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಶ್ಲಾಘಿಸಿದರು.

ರಾಜನಹಳ್ಳಿಯಲ್ಲಿ ಎರಡನೇ ವರ್ಷದ ಮಹರ್ಷಿ ವಾಲ್ಮೀಕಿ ಜಾತ್ರೆಯ ಪ್ರಯುಕ್ತ ಭಾನುವಾರ ನಡೆದ ಜನಜಾಗೃತಿ ಸಮಾವೇಶದಲ್ಲಿ ವಾಲ್ಮೀಕಿ ವಿಜಯ ಸ್ಮರಣ ಸಂಚಿಕೆ ಬಿಡುಗಡೆ ಮಾಡಿ ಮಾತನಾಡಿದರು.

ಪುಣ್ಯಾನಂದ ಸ್ವಾಮೀಜಿ ಸ್ಥಾಪಿಸಿದ್ದ ಈ ಕ್ಷೇತ್ರವನ್ನು ಕಳೆದ 12 ವರ್ಷಗಳಿಂದ ಪ್ರಸನ್ನಾನಂದ ಸ್ವಾಮೀಜಿ ಅಭಿವೃದ್ಧಿ ಪಡಿಸಲು, ಸಮಾಜವನ್ನು ಮುಂದಕ್ಕೆ ಒಯ್ಯಲು ಹೋರಾಟ ಮಾಡುತ್ತಿದ್ದಾರೆ ಎಂದು ತಿಳಿಸಿದರು.

ಎಲ್‌.ಜಿ. ಹಾವನೂರು, ರಾಮಕೃಷ್ಣ ಹೆಗಡೆ, ಉಗ್ರಪ್ಪ ಅವರ ಸಹಕಾರದೊಂದಿಗೆ ದೇವೇಗೌಡರು ಹೋರಾಟ ಮಾಡಿದ್ದರಿಂದ ಚಂದ್ರಶೇಖರ್‌ ಅವರು ಪ್ರಧಾನಿಯಾಗಿದ್ದ ಸಮಯದಲ್ಲಿ ವಾಲ್ಮೀಕಿ ಸಮಾಜ ಪರಿಶಿಷ್ಟ ಪಂಗಡದಲ್ಲಿ ಬರುವಂತಾಯಿತು. ಅದರ ಪರಿಣಾಮವಾಗಿ ಈಗ 14 ಶಾಸಕರು, ಇಬ್ಬರು ಸಂಸದರು ಆಗಿದ್ದಾರೆ ಎಂದು ಹೇಳಿದರು.

‘ಪುಣ್ಯಾನಂದ ಸ್ವಾಮೀಜಿ ಅವರ ಹೆತ್ತವರು ತಿಪಟೂರಿನಲ್ಲಿ ಅತ್ಯಂತ ಕಷ್ಟದ ಜೀವನ ಮಾಡುತ್ತಿರುವುದನ್ನು ಮಾಧ್ಯಮಗಳ ಮೂಲಕ ತಿಳಿದೆ. ಅಲ್ಲಿ ಅವರು ತಳ್ಳುಗಾಡಿ ಮೂಲಕ ಜೀವನ ಸಾಗಿಸುತ್ತಿದ್ದರು. ಅವರಿಗೆ ನಾನು ನೆರವು ನೀಡಿದ ಬಳಿಕ ಅನೇಕರು ಸಹಾಯಹಸ್ತ ಚಾಚಿದ್ದರಿಂದ ನೆಮ್ಮದಿಯ ಬದುಕು ಕಟ್ಟಿಕೊಳ್ಳಲು ಸಾಧ್ಯವಾಯಿತು’ ಎಂದು ನೆನಪಿಸಿಕೊಂಡರು.

‘ಎಸ್‌ಟಿ ಮೀಸಲಾತಿ ಹೆಚ್ಚಿಸಲು ಸ್ವಾಮೀಜಿಯ ನೇತೃತ್ವದಲ್ಲಿ ಪಾದಯಾತ್ರೆ ಮಾಡಿದಾಗ ಜಸ್ಟಿಸ್‌ ನಾಗಮೋಹನ್‌ದಾಸ್‌ ಸಮಿತಿ ರಚಿಸುವ ಮೂಲಕ ವೈಜ್ಞಾನಿಕ ಅಧ್ಯಯನಕ್ಕೆ ಅವಕಾಶವನ್ನು ನಾನು ಮುಖ್ಯಮಂತ್ರಿ ಆಗಿದ್ದಾಗ ನೀಡಿದ್ದೆ’ ಎಂದರು.

ಪ್ರಸನ್ನಾನಂದ ಸ್ವಾಮೀಜಿ, ಮಹಿಮ ಪಟೇಲ್‌, ಎಚ್‌.ಎಸ್‌. ಶಿವಶಂಕರ್‌, ನಟ ಶಶಿಕುಮಾರ್‌ ಅವರೂ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT