ಜಗಳೂರು: ತಾಲ್ಲೂಕಿನಲ್ಲಿ ವಿವಿಧ ಕಂಪನಿಗಳ ನೆರವಿನಿಂದ ₹ 80 ಲಕ್ಷ ವೆಚ್ಚದ ಆಮ್ಲಜನಕ ಉತ್ಪಾದನೆ ಘಟಕ ನಿರ್ಮಾಣ ಕಾರ್ಯ ಭರದಿಂದ ಸಾಗಿದ್ದು, ಶೀಘ್ರ ಆರಂಭಿಸಲಾಗುವುದು ಎಂದು ಶಾಸಕ ಎಸ್.ವಿ. ರಾಮಚಂದ್ರ ಹೇಳಿದರು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘದಿಂದ 7 ಹಾಗೂ ಪೊಲೀಸ್ ಇಲಾಖೆಯಿಂದ ದೇಣಿಗೆ ನೀಡಲಾದ 2 ಆಮ್ಲಜನಕ ಸಾಂದ್ರಕಗಳನ್ನು ಬುಧವಾರ ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಹಸ್ತಾಂತರಿಸಿ ಅವರು ಮಾತನಾಡಿದರು.
‘ವಿವಿಧ ಸಂಘ–ಸಂಸ್ಥೆಗಳು ಹಾಗೂ ಕಂಪನಿಗಳು ಸಂಕಷ್ಟದ ಈ ಸಂದರ್ಭದಲ್ಲಿ ಸೋಂಕಿತರ ನೆರವಿಗೆ ಧಾವಿಸಿರುವುದು ಶ್ಲಾಘನೀಯ. ಆಮ್ಲಜನಕ ಘಟಕ ನಿರ್ಮಾಣದಿಂದ ಸ್ಥಳೀಯವಾಗಿ ಆಮ್ಲಜನಕವನ್ನು ಉತ್ಪಾದನೆ ಮಾಡುವುದರಿಂದ ಎಲ್ಲರಿಗೂ ಅನುಕೂಲವಾಗಲಿದೆ. ಆರೋಗ್ಯ ಇಲಾಖೆಯ ಉತ್ತಮ ಕಾರ್ಯನಿರ್ವಹಣೆಯಿಂದ ಜಿಲ್ಲೆಯಲ್ಲಿಯೇ ನಮ್ಮ ತಾಲ್ಲೂಕಿನಲ್ಲಿ ಅತ್ಯಂತ ಕಡಿಮೆ ಸೋಂಕು ಪ್ರಕರಣಗಳು ಕಂಡುಬಂದಿವೆ’ ಎಂದರು.
ಪಟ್ಟಣ ಪಂಚಾಯಿತಿ ಅಧ್ಯಕ್ಷ ಆರ್. ತಿಪ್ಪೇಸ್ವಾಮಿ, ಉಪಾಧ್ಯಕ್ಷೆ ಲಲಿತಮ್ಮ ಶಿವಣ್ಣ, ತಾಲ್ಲೂಕು ಆರೋಗ್ಯಾಧಿಕಾರಿ ಡಾ. ನಾಗರಾಜ್, ಸಿಪಿಐ ಮಂಜುನಾಥ್ ಪಂಡಿತ್, ಪಿಎಸ್ಐ ಸಂತೋಷ್ ಬಾಗೋಜಿ, ಬಿಜೆಪಿ ಮಂಡಲ ಅಧ್ಯಕ್ಷ ಎಚ್.ಸಿ. ಮಹೇಶ್ ಇದ್ದರು.