ದಾವಣಗೆರೆ: ಇಲ್ಲಿನ ಜಿಎಂಐಟಿ ಕಾಲೇಜಿನ ಆವರಣದಲ್ಲಿ ಮಂಗಳವಾರ ಬೆಳ್ಳಂಬೆಳ್ಳಿಗೆ ಮಳೆಯ ಸಿಂಚನದ ನಡುವೆ ಬೀಜದುಂಡೆ ತಯಾರಿಸುವ ಕಾರ್ಯ ನಡೆಯಿತು.
ಬಿಜೆಪಿ ಮಹಿಳಾ ಮೋರ್ಚಾ, ಯುವ ಮೋರ್ಚಾ, ರೈತ ಮೋರ್ಚಾದ ಕಾರ್ಯಕರ್ತರು ಹುಣಸೆ, ಹೊಂಗೆ, ಬೇವು, ಹೆಬ್ಬೇವು, ಆಲ, ನೇರಳೆ ಬೀಜದುಂಡೆಗಳನ್ನು ಬಿಜೆಪಿ ಕಾರ್ಯಕರ್ತರು ತಯಾರಿಸಿದರು.
ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಬಸವರಾಜ ಬೀಜದುಂಡೆ ತಯಾರಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಮೇಯರ್ ಎಸ್.ಟಿ. ವೀರೇಶ್ ಮಾತನಾಡಿ, ‘ಬಿಜೆಪಿಯಿಂದ 1 ಲಕ್ಷ ಬೀಜದುಂಡೆ ತಯಾರು ಮಾಡುವ ಕಾರ್ಯಕ್ರಮ ಇದಾಗಿದೆ. ಇವುಗಳನ್ನು ತಯಾರು ಮಾಡಿ ಖಾಲಿ ಜಾಗ, ಗೋಮಾಳ, ಅರಣ್ಯ ಸೇರಿದಂತೆ ಇತರೆಡೆ ಬಿಸಾಡುತ್ತೇವೆ. ಮಳೆಗಾಲದಲ್ಲಿ ಇವುಗಳು ಬೆಳೆದು ಗಿಡಗಳಾಗುತ್ತವೆ. ಇದರಿಂದ ಜಿಲ್ಲೆಯಲ್ಲಿ ಹಸೀರಿಕರಣ ಹೆಚ್ಚಾಗುತ್ತದೆ’ ಎಂದರು.
ಪ್ರಸ್ತುತ ದಿನಗಳಲ್ಲಿ ಹಸಿರೀಕರಣದೊಂದಿಗೆ ಅರಣ್ಯ ಪ್ರದೇಶ ಹೆಚ್ಚಿಸುವ ಜವಾಬ್ದಾರಿ ಎಲ್ಲರ ಮೇಲಿದ್ದು, ಅದರಂತೆ ಎಲ್ಲರೂ ಸೇರಿ ಸಂಘಟನೆಯೊಂದಿಗೆ ಕೆಲಸ ಮಾಡಲಾಗುತ್ತಿದೆ ಎಂದು ಮೇಯರ್ ಹೇಳಿದರು.
‘ಅರಣ್ಯ ನಾಶಕ್ಕೆ ಪರಿಹಾರ ಕಂಡುಕೊಳ್ಳುವ ಉದ್ದೆಶದಿಂದ ಬೀಜದುಂಡೆ ಮೂಲಕ ಹಸಿರು ಬೆಳೆಸುವ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಬರಡು ಭೂಮಿಯಲ್ಲಿ ಬೀಜದುಂಡೆ ಬಿತ್ತನೆ ಮಾಡುವ ಮೂಲಕ ಕಾಡನ್ನಾಗಿ ಪರಿವರ್ತಿಸಿ ಪ್ರಕೃತಿಯನ್ನು ನಳನಳಿಸುವಂತೆ ಮಾಡುವ ವಿನೂತನ ಪ್ರಯತ್ನ ಇದಾಗಿದೆ’ ಎಂದುಸ್ವಚ್ಛ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷರಾದ ಡಾ. ಶುಭಾವಿಜಯ್ ಹೇಳಿದರು.