ದಾವಣಗೆರೆ: ನಗರದ ಚೌಕಿಪೇಟೆಯ ಶ್ರೀ ಗುರು ಶಿವಯೋಗಿ ಬಕ್ಕೇಶ್ವರ ಸ್ವಾಮಿಗಳ 100ನೇ ವರ್ಷದ ಮಹಾ ರಥೋತ್ಸವ ಸೋಮವಾರ ಸಂಜೆ ವಿಜೃಂಭಣೆಯಿಂದ ನಡೆಯಿತು.
ವಿವಿಧ ಬಗೆಯ ಹೂವುಗಳಿಂದ ಅಲಂಕರಿಸಿದ ರಥದಲ್ಲಿ ಸ್ವಾಮಿಯ ಉತ್ಸವ ಮೂರ್ತಿಯನ್ನು ಇಡಲಾಯಿತು. ಇದಕ್ಕೂ ಮೊದಲು ಜಯದೇವ ಜಗದ್ಗುರುಗಳ ಭಾವಚಿತ್ರವನ್ನು ಪಲ್ಲಕ್ಕಿಯಲ್ಲಿ ತಂದು, ರಥದ ಸುತ್ತ ಪ್ರದಕ್ಷಿಣೆ ಮಾಡಿಸಿ ರಥಾರೋಹಣ ಮಾಡಲಾಯಿತು.
ಪ್ರಮುಖ ಬೀದಿಗಳಲ್ಲಿ ರಥೋತ್ಸವ ನಡೆಯಿತು. ಈ ವೇಳೆ ನೆರೆದಿದ್ದ ಭಕ್ತರು ಕಳಶದತ್ತ ಬಾಳೆ ಹಣ್ಣು ತೂರಿದರು. ಉತ್ಸವದ ಪ್ರಯುಕ್ತ ದೇವಸ್ಥಾನದ ಸುತ್ತಮುತ್ತ ವಿದ್ಯುದ್ದೀಪಗಳಿಂದ ಅಲಂಕಾರ ಮಾಡಲಾಗಿತ್ತು. ಎಲ್ಲೆಲ್ಲೂ ವಾದ್ಯಗಳ ಸದ್ದು ಕೇಳಿಬರುತ್ತಿತ್ತು. ಜತೆಗೆ ನಾದಸ್ವರ, ನಂದಿಕೋಲು ಇನ್ನಿತರ ಕಲಾ ತಂಡಗಳು ಮೇಳೈಸಿದ್ದವು.
ಭಕ್ತರು ಹಣ್ಣು, ಹೂವು, ತೆಂಗಿನಕಾಯಿಯೊಂದಿಗೆ ಆಗಮಿಸಿ ಶಿವಯೋಗಿ ಬಕ್ಕೇಶ್ವರರನ್ನು ಸ್ಮರಣೆ ಮಾಡಿ ಇಷ್ಟಾರ್ಥ ನೆರವೇರಿಸುವಂತೆ ಪ್ರಾರ್ಥಿಸಿದರು. ಬೆಳಿಗ್ಗೆ ರುದ್ರಾಭಿಷೇಕ, ಹೋಳಿಗೆ ಎಡೆ ಕೊಡುವ ಸಂಪ್ರದಾಯ ಪಾಲಿಸಲಾಯಿತು.
ರಥೋತ್ಸವದ ವೇಳೆ ಹೆಬ್ಬಾಳು ಮಠದ ಶ್ರೀ ಮಹಾಂತ ರುದ್ರೇಶ್ವರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಶಾಸಕ ಡಾ. ಶಾಮನೂರು ಶಿವಶಂಕರಪ್ಪ, ಮಾಜಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್, ಉದ್ಯಮಿಗಳಾದ ಎಸ್.ಎಸ್. ಗಣೇಶ್, ಎ.ಎಸ್. ವೀರಣ್ಣ ಪಾಲ್ಗೊಂಡಿದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.