ಹರಪನಹಳ್ಳಿ: ತಾಲ್ಲೂಕಿನಲ್ಲಿ ಒಂದೇ ವಾರದಲ್ಲಿ ನಾಲ್ಕು ಜನರಿಗೆ ಕಪ್ಪು ಶಿಲೀಂಧ್ರ ಕಾಣಿಸಿಕೊಂಡಿದೆ. ಉದ್ಗಟ್ಟಿ ದೊಡ್ಡ ತಾಂಡಾ (ಬಾಪೂಜಿ ನಗರ)ದ35 ವರ್ಷದ ವ್ಯಕ್ತಿಯೊಬ್ಬರು ಮೃತಪಟ್ಟಿದ್ದು, ಕಪ್ಪು ಶಿಲೀಂಧ್ರದ ಶಂಕೆ ವ್ಯಕ್ತವಾಗಿದೆ.
ಉದ್ಗಟ್ಟಿ ದೊಡ್ಡ ತಾಂಡಾದ ವ್ಯಕ್ತಿ ಕೋವಿಡ್ನಿಂದ ಬಳಲಿ, ವಾರದ ಹಿಂದೆ ಸ್ಥಳೀಯ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು. ಬಳಿಕ ವೈದ್ಯರ ಶಿಫಾರಸಿನ ಮೇರೆಗೆ ಶಿವಮೊಗ್ಗದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಚಿಕಿತ್ಸೆಗೆ ಸ್ಪಂದಿಸದೇ ಮೃತಪಟ್ಟಿದ್ದಾರೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.
‘ನೀಲಗುಂದದ 45 ವರ್ಷದ ವ್ಯಕ್ತಿ ಹುಬ್ಬಳ್ಳಿ ಆಸ್ಪತ್ರೆಯಲ್ಲಿ ಮತ್ತು ಅರಸನಾಳು ಗ್ರಾಮದ 40 ವರ್ಷದ ವ್ಯಕ್ತಿ ದಾವಣಗೆರೆ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಮಹಿಳೆಗೂ ಕಪ್ಪು ಶಿಲೀಂಧ್ರದ ಲಕ್ಷಣಗಳು ಕಂಡುಬಂದಿವೆ. ಉದ್ಗಟ್ಟಿ ದೊಡ್ಡ ತಾಂಡಾದ ವ್ಯಕ್ತಿಗೆ ಕಪ್ಪು ಶಿಲೀಂಧ್ರ ಇದ್ದಿದ್ದು ದೃಢವಾಗಿಲ್ಲ. ವರದಿ ಬರಬೇಕಿದೆ’ ಎಂದು ತಾಲ್ಲೂಕು ವೈದ್ಯಾಧಿಕಾರಿ ಡಾ.ಪಿ.ಕೆ.ವೆಂಕಟೇಶ್ ತಿಳಿಸಿದ್ದಾರೆ.