ದಾವಣಗೆರೆ: ಹೊನ್ನಾಳಿ ತಾಲ್ಲೂಕಿನ ಬೇಲಿಮಲ್ಲೂರು ಗ್ರಾಮದಲ್ಲಿ ಸೋಮವಾರ ಎತ್ತುಗಳಿಗೆ ನೀರು ಕುಡಿಸಲೆಂದು ತುಂಗಭದ್ರಾ ನದಿಯಲ್ಲಿ ಮುಳುಗಿದ್ದ ರೈತ ಕೋಲೆಮಣ್ಣಾರ ರಮೇಶ್ (28) ಅವರ ಶವ ಮಂಗಳವಾರ ಪತ್ತೆಯಾಗಿದೆ.
ರಮೇಶ್ ಎತ್ತುಗಳಿಗೆ ನೀರು ಕುಡಿಸಲು ಹಾಗೂ ಮೈ ತೊಳೆಯಲು ನದಿಗೆ ಇಳಿದಿದ್ದರು. ಈ ವೇಳೆ ಭಾರಿ ಪ್ರಮಾಣದ ನೀರು ಹರಿದು ಬರುತ್ತಿದ್ದರಿಂದ ನೀರಿನ ರಭಸಕ್ಕೆ ಕೊಚ್ಚಿಕೊಂಡು ಹೋಗಿದ್ದರು. ಹೊನ್ನಾಳಿಯ ಅಗ್ನಿಶಾಮಕ ಠಾಣೆಯ ಸಿಬ್ಬಂದಿ ತುಂಗಭದ್ರಾ ನದಿಯಲ್ಲಿ ಹುಡುಕಾಟ ನಡೆಸಿದ್ದರೂ ರಮೇಶ ಅವರ ಶವ ಪತ್ತೆಯಾಗಿಲ್ಲ.
ರಮೇಶ್ ಐದು ತಿಂಗಳ ಹಿಂದೆ ಚನ್ನಗಿರಿ ತಾಲ್ಲೂಕು ಬಸವಾಪಟ್ಟಣ ಸಮೀಪದ ಸಂಗಾಹಳ್ಳಿಯ ಹುಲಿಗೆಮ್ಮ ಅವರನ್ನು ವಿವಾಹವಾಗಿದ್ದರು. ಭಾನುವಾರ ಪತ್ನಿಯನ್ನು ದೀಪಾವಳಿ ಹಬ್ಬಕ್ಕೆಂದು ತವರುಮನೆಗೆ ಕಳುಹಿಸಿದ್ದರು.
ಶಾಸಕ ಎಂ.ಪಿ. ರೇಣುಕಾಚಾರ್ಯ ಹಾಗೂ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಅವರು ಸ್ಥಳಕ್ಕೆ ಭೇಟಿ ನೀಡಿ ₹ 5 ಲಕ್ಷದ ಚೆಕ್ ಅನ್ನು ರಮೇಶ್ ಅವರ ಪತ್ನಿ ಹುಲಿಗೆಮ್ಮ ಅವರಿಗೆ ನೀಡಿದರು.