ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎರೆಬೂದಿಹಾಳ್‌ನಲ್ಲಿ ರಸ್ತೆಯೇ ಸ್ಮಶಾನ

Last Updated 11 ಮಾರ್ಚ್ 2020, 19:36 IST
ಅಕ್ಷರ ಗಾತ್ರ

ದಾವಣಗೆರೆ: ಈ ಊರಿನಲ್ಲಿ ಯಾರಾದರೂ ಮೃತಪಟ್ಟರೆ ರಸ್ತೆ ಬದಿಯಲ್ಲೇ ದಹನ ಮಾಡಲಾಗುತ್ತದೆ. ಸ್ಮಶಾನದ ವ್ಯವಸ್ಥೆ ಮಾಡಿ ಎಂಬ ಕೂಗು ಎದ್ದು ದಶಕಗಳೇ ಕಳೆದರೂ ಪರಿಹಾರ ದೊರೆತಿಲ್ಲ.

ಇದು ದೇವರಬೆಳಕೆರೆಯ ಬಳಿಯ ಎರೆಬೂದಿಹಾಳ್‌ನ ನಿವಾಸಿಗಳ ಸಮಸ್ಯೆ.

‘ಇಲ್ಲಿ ಸ್ಮಶಾನಕ್ಕಾಗಿ ಮೀಸಲಾಗಿರುವ ಭೂಮಿ ಖಾಸಗಿಯವರಲ್ಲಿದೆ. ಸ್ಮಶಾನದ ಭೂಮಿಯನ್ನು ಸ್ಮಶಾನಕ್ಕಾಗಿಯೇ ಬಿಡಿಸಿಕೊಡಲೆಂದು ಸ್ಥಳೀಯರ ಪ್ರತಿನಿಧಿಗಳು, ಅಧಿಕಾರಿಗಳು ಕೆಲವು ವರ್ಷಗಳ ಹಿಂದೆ ಹೋಗಿದ್ದಾಗ ವಿವಾದಕ್ಕೆ ಸಂಬಂಧಿಸಿದ ಮನೆಯ ಯುವಕ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡು ಬಿಟ್ಟಿದ್ದ. ಹಾಗಾಗಿ ಮತ್ತೆ ಈ ಭೂಮಿ ಬಿಡಿಸಿಕೊಡಲೆಂದು ಯಾರೂ ಹೋಗಿಲ್ಲ’ ಎನ್ನುತ್ತಾರೆ ಸ್ಥಳೀಯ ನಿವಾಸಿ ನಾಗರಾಜ್‌.

ಹಿಂದೆ ಎಲ್ಲರೂ ಹಳೇ ಊರಿನಲ್ಲಿ ಇದ್ದರು. ದೇವರಬೆಳಕೆರೆಯನ್ನು ಎತ್ತರ ಮಾಡುವ ಸಮಯದಲ್ಲಿ ಅಲ್ಲಿದ್ದವರನ್ನೆಲ್ಲ ಇಲ್ಲಿಗೆ ಸ್ಥಳಾಂತರಿಸಲಾಯಿತು. ಜಮೀನು ಇರುವವರ ಕುಟುಂಬದಲ್ಲಿ ಯಾರಾದರೂ ಮೃತಪಟ್ಟರೆ ಅವರ ಜಮೀನಿನ ಬದಿಯಲ್ಲಿ ಅಂತ್ಯಕ್ರಿಯೆ ನೆರವೇರಿಸುತ್ತಾರೆ. ಭೂಮಿ ಇಲ್ಲದವರಿಗೆ ರಸ್ತೆಯ ಬದಿಯೇ ಸ್ಮಶಾನ ಎಂದು ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ಕೆರೆ ನಿರ್ಮಾಣದ ಕಾಲದಲ್ಲಿ ಮಣ್ಣು ಹಾಕಿಕೊಳ್ಳಲೆಂದು ತಾತ್ಕಾಲಿಕವಾಗಿ ಭೂಮಿಯನ್ನು ಖಾಸಗಿಯವರಿಗೆ ನೀಡಲಾಗಿತ್ತು. ನಿರ್ಮಾಣ ಕಾರ್ಯ ಮುಗಿದ ಬಳಿಕ ಈ ಭೂಮಿಯನ್ನು ಬಿಟ್ಟುಕೊಟ್ಟಿಲ್ಲ. ಈ ಭೂಮಿಯನ್ನು ಬಿಡಿಸಿಕೊಡಬೇಕು. ಇಲ್ಲವೇ ಬೇರೆಡೆ ಸ್ಮಶಾನಕ್ಕೆ ಜಮೀನು ಒದಗಿಸಬೇಕು ಎಂಬುದು ಸ್ಥಳೀಯ ಗ್ರಾಮ ಪಂಚಾಯಿತಿ ಸದಸ್ಯೆ ಜ್ಯೋತಿ ಗಿರೀಶ್‌ ಅವರ ಒತ್ತಾಯ.

‘ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಪರಿಹರಿಸಲು ಸಾಧ್ಯವಿಲ್ಲದ ‍ಪ್ರಕರಣ ಇದು. ತಾಲ್ಲೂಕು, ಜಿಲ್ಲಾ ಮಟ್ಟದ ಅಧಿಕಾರಿಗಳು, ಜನಪ್ರತಿನಿಧಿಗಳು ಸೇರಿ ಸಮಸ್ಯೆ ಪರಿಹರಿಸಬೇಕು. ಈ ಬಗ್ಗೆ ಹಿಂದಿನ, ಈಗಿನ ಶಾಸಕರಿಗೆ, ಅಧಿಕಾರಿಗಳಿಗೆ ದೂರು ನೀಡಲಾಗಿದೆ’ ಎನ್ನುತ್ತಾರೆ ಪಂಚಾಯಿತಿ ಸದಸ್ಯೆ ಎಂ. ಮಂಜುಳಾ

ಈ ಭೂಮಿ ವಿವಾದ ಡಿಸಿ ಕೋರ್ಟ್‌ನಲ್ಲಿದೆ. ಏನು ಆದೇಶ ಬರುತ್ತದೆ ಎಂಬುದನ್ನು ಕಾದು ನೋಡಬೇಕು. ಆದೇಶ ಬಂದ ಮೇಲೆ ಕ್ರಮ ಕೈಗೊಳ್ಳಬೇಕು. ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬೇರೆ ಭೂಮಿ ಇಲ್ಲ. ಎಲ್ಲ ಕಡೆ ಕೃಷಿಭೂಮಿಯೇ ಇದೆ. ಹಾಗಾಗಿ ಸ್ಮಶಾನಕ್ಕೆ ಭೂಮಿ ಕಾದಿರಿಸುವುದು ಕಷ್ಟವಾಗಿದೆ ಎಂದು ಗ್ರಾಮ ಲೆಕ್ಕಾಧಿಕಾರಿ ಸುರೇಶ್‌ ಸಮಸ್ಯೆ ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT