ದಾವಣಗೆರೆ: ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ನಿಂದ ವೇದ ಜ್ಞಾನ ವಿಕಾಸ ಕಾರ್ಯಕ್ರಮದಡಿ ಪೌಷ್ಟಿಕ ಆಹಾರ ಮೇಳವನ್ನು ಸೋಮವಾರ ದಾವಣಗೆರೆ ಸಿ ವಲಯದ ವಿನೋಬನಗರದಲ್ಲಿ ಹಮ್ಮಿಕೊಳ್ಳಲಾಯಿತು.
ಆಹಾರ ಮೇಳದಲ್ಲಿ ರಾಗಿ ಕಿಂಸ, ಮೊಳಕೆಕಾಳು ಕಟ್ಟಿದ್ದು, ನವಣೆಕ್ಕಿ ಪಾಯಸ, ನವಣೆಕ್ಕಿ ಬಾತ್, ನವಣೆಕ್ಕಿ, ಶೇಂಗಾ ಉಂಡೆ, ರಾಗಿ ತಾಳಿಪಟ್ಟು, ಪಾಲಕ್ ಜ್ಯೂಸ್, ಸಜ್ಜೆರೊಟ್ಟಿ, ಮಿಶ್ರ ಕಾಳುಗಳ ಜ್ಯೂಸ್ ಮುಂತಾದ ತಿನಿಸುಗಳು ಗಮನ ಸೆಳೆದವು.
ಗ್ರಾಹಕ ವೇದಿಕೆಯ ಮಾಜಿ ಸದಸ್ಯೆ ಮಂಜುಳಾ ಬಸವಲಿಂಗಪ್ಪ ಮೇಳವನ್ನು ಉದ್ಘಾಟಿಸಿ ಮಾತನಾಡಿ, ‘ಹಿಂದಿನವರು ಜಂಕ್ ಫುಡ್ ತಿನ್ನುತ್ತಿರಲಿಲ್ಲ. ಸಹಜ ಆಹಾರಗಳನ್ನು ಸೇವಿಸುತ್ತಿದ್ದರು. ಶ್ರಮಜೀವಿಗಳಾಗಿದ್ದರು. ಹಾಗಾಗಿ ಆರೋಗ್ಯವಾಗಿ ಇದ್ದರು. ಆದರೆ ಈಗ ಫಿಜಾ, ಪಾನಿಪೂರಿ, ಗೋಬಿ ಎಂದು ಹೊರಗೆ ತಿನ್ನೋದೇ ಜಾಸ್ತಿಯಾಗಿದೆ. ಅವುಗಳನ್ನು ಬಿಟ್ಟು ಮನೆಯಲ್ಲಿಯೇ ಪೌಷ್ಟಿಕ ಆಹಾರ ಸೇವಿಸುವಂತಾಗಬೇಕು. ಸಿರಿಧಾನ್ಯಗಳ ಬಳಕೆ ಹೆಚ್ಚು ಮಾಡಬೇಕು’ ಎಂದು ಸಲಹೆ ನೀಡಿದರು.
ವಕೀಲರಾದ ಅನಿತಾ ಮಾತನಾಡಿ, ‘ಹೆಣ್ಣುಮಕ್ಕಳು ಮನೆಕೆಲಸವನ್ನು ಕೀಳು ಎಂದು ತಿಳಿಯಬಾರದು. ಜತೆಗೆ ಮನೆಕೆಲಸಕ್ಕಷ್ಟೇ ಸೀಮಿತರೂ ಆಗಬಾರದು. ಮನೆಯಲ್ಲಿ ಟಿ.ವಿ.ಯಲ್ಲಿ ಧಾರಾವಾಹಿಗಳನ್ನಷ್ಟೇ ನೋಡುವ ಹೆಣ್ಣುಮಕ್ಕಳು ಜಾಸ್ತಿ. ಸ್ವಲ್ಪ ಸುದ್ದಿಗಳನ್ನು ಕೂಡ ಗಮನಿಸಬೇಕು. ಮಕ್ಕಳ ಕಡೆಗೆ ಎಚ್ಚರ ಇರಬೇಕು. ಆನ್ಲೈನ್ ಕ್ಲಾಸ್ ಎಂದು ಮಕ್ಕಳ ಕೈಗೆ ಮೊಬೈಲ್ ನೀಡಿ ನೀವು ಆರಾಮವಾಗಿದ್ದರೆ, ಅವರು ಆನ್ಲೈನ್ ಕ್ಲಾಸ್ಬಿಟ್ಟು ಬೇರೇನೋ ಬೇಡದವುಗಳನ್ನು ನೋಡುತ್ತಾರೆ’ ಎಂದು ಎಚ್ಚರಿಸಿದರು.
ಒಕ್ಕೂಟದ ಅಧ್ಯಕ್ಷೆ ಕವಿತಾ ಅಧ್ಯಕ್ಷತೆ ವಹಿಸಿದ್ದರು. ಜ್ಞಾನವಿಕಾಸ ಸಮನ್ವಯಾಧಿಕಾರಿ ಗಾಯತ್ರಿ ಎಚ್., ಸೇವಾ ಪ್ರತಿನಿಧಿಗಳಾದ ರಾಧಾ, ತರಬೇತಿ ಸಹಾಯಕಿ ಪ್ರೇಮಾ, ಕೇಂದ್ರದ ಸದಸ್ಯರು ಇದ್ದರು.