ಚನ್ನಗಿರಿ: ತಾಲ್ಲೂಕು ಉಬ್ರಾಣಿ ಹೋಬಳಿ ವ್ಯಾಪ್ತಿಯ ಪೆನ್ನಸಮುದ್ರ ಗ್ರಾಮದಲ್ಲಿ ಗುರುವಾರ ನಸುಕಿನಲ್ಲಿ ದೇವಸ್ಥಾನದ ಹುಂಡಿ ಒಡೆಯಲಾಗಿದೆ.
ಮಹಾರುದ್ರಸ್ವಾಮಿ ದೇವಸ್ಥಾನದ ಪ್ರವೇಶದ್ವಾರದ ಬೀಗ ಮುರಿದು ಒಳ ನುಗ್ಗಿರುವ ಕಳ್ಳರು, ದೇವರ ಹುಂಡಿಯ ಬೀಗವನ್ನು ಒಡೆದು ಹುಂಡಿಯಲ್ಲಿದ್ದ ಹಣವನ್ನು ಗುರುವಾರ ಕಳ್ಳತನ ಮಾಡಿದ್ದಾರೆ. ಬೆಳಗಿನ ಜಾವ 2 ಗಂಟೆ ಸಮಯದಲ್ಲಿ ಕಳ್ಳತನ ನಡೆದಿದೆ. ದೇವಸ್ಥಾನದ ಸಿಸಿಟಿವಿ ಕ್ಯಾಮೆರಾದಲ್ಲಿ ದೃಶ್ಯ ಸೆರೆಯಾಗಿದೆ.
ಸ್ಥಳಕ್ಕೆ ದಾವಣಗೆರೆಯಿಂದ ಶ್ವಾನದಳ ಹಾಗೂ ಬೆರಳಚ್ಚು ತಜ್ಞರು ಬಂದು ಪರಿಶೀಲನೆ ನಡೆಸಿದರು. ಚನ್ನಗಿರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಚನ್ನಗಿರಿ ತಾಲ್ಲೂಕು ಪೆನ್ನಸಮುದ್ರ ಗ್ರಾಮದಲ್ಲಿ ದೇಗುಲದ ಹುಂಡಿ ಒಡೆದು ಕಳ್ಳತನ ಮಾಡಲಾಗಿದೆ
ದೇವಸ್ಥಾನದಲ್ಲಿ ಸ್ಟೀಲ್ ಹುಂಡಿಯನ್ನು ಇಡಲಾಗಿತ್ತು. ವರ್ಷಕ್ಕೊಮ್ಮೆ ಹುಂಡಿಯನ್ನು ತೆರೆದು ಹಣವನ್ನು ದೇವಸ್ಥಾನದ ಅಭಿವೃದ್ಧಿಗೆ ಬಳಸಲಾಗುತ್ತಿತ್ತು. ಸುಮಾರು ₹5 ಲಕ್ಷ ಹಣ ಕಳವಾಗಿರಬಹುದು ಎಂದು ಅಂದಾಜಿಸಲಾಗಿದೆ ಎಂದು ಗ್ರಾಮ ಪಂಚಾಯಿತಿ ಸದಸ್ಯ ಕೆ.ಜೆ. ಗಿರೀಶ್ ತಿಳಿಸಿದರು.