ದಾವಣಗೆರೆ: ದಾವಣಗೆರೆಯ ದೃಶ್ಯಕಲಾ ಮಹಾವಿದ್ಯಾಲಯ ಆವರಣದಲ್ಲಿ ಸ್ಮಾರ್ಟ್ಸಿಟಿ ಯೋಜನೆಯಡಿ ನಿರ್ಮಿಸಲಾಗಿರುವ ಥೀಂ ಪಾರ್ಕ್ ಅನ್ನು ಶೀಘ್ರ ಉದ್ಘಾಟಿಸಲಾಗುವುದು ಎಂದು ಸಂಸದ ಜಿ.ಎಂ. ಸಿದ್ದೇಶ್ವರ ಹೇಳಿದರು.
ಥೀಂ ಪಾರ್ಕ್ ಕಾಮಗಾರಿಯನ್ನು ಬುಧವಾರ ಪರಿಶೀಲಿಸಿ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
‘ಸ್ಮಾರ್ಟ್ ಸಿಟಿ ಯೋಜನೆಯಡಿ ₹ 6 ಕೋಟಿ ಅನುದಾನ ಬಿಡುಗಡೆಯಾಗಿದ್ದು, ಥೀಂ ಪಾರ್ಕ್ನ ಶೇ 98ರಷ್ಟು ಕೆಲಸ ಮುಗಿದಿದೆ. ಥೀಂ ಪಾರ್ಕ್ ಜಿಲ್ಲಾ ಉಸ್ತುವಾರಿ ಸಚಿವರ ಜವಾಬ್ದಾರಿಗೆ ಸೇರಿದ್ದು, ಹಾಗಾಗಿ ಅವರ ದಿನಾಂಕ ನೋಡಿಕೊಂಡು ಉದ್ಘಾಟನೆ ಮಾಡಲಾಗುವುದು’ ಎಂದರು.
‘ಚಿಕ್ಕ ಮಕ್ಕಳು ಕಬಡ್ಡಿ, ಗೋಲಿ, ಚಿನ್ನಿದಾಂಡು ಆಡುವಂತಹ ಗೊಂಬೆಗಳನ್ನು ಸುಂದರವಾಗಿ ನಿರ್ಮಾಣ ಮಾಡಲಾಗಿದೆ. ಬಹಳ ಚೆನ್ನಾಗಿ ಇವೆ. ಎಲ್ಲವನ್ನೂ ನೋಡಿದರೆ ನನ್ನ ಬಾಲ್ಯ ನೆನಪಾಗುತ್ತದೆ. ನಾನು ಸಹ ಚಿಕ್ಕವನಾಗಿದ್ದಾಗ ಚಿನ್ನಿದಾಂಡು, ಗೋಲಿ, ಕಬಡ್ಡಿ ಆಡಿದ್ದೇನೆ. ಎಲ್ಲವನ್ನೂ ನೋಡಿದರೆ ಹಳ್ಳಿಯ ಜೀವನ ನೆನಪಾಗುತ್ತದೆ’ ಎಂದರು.
‘ಥೀಂ ಪಾರ್ಕ್ಗೆ ಬರುವ ರಸ್ತೆಯಲ್ಲಿ ಗಿಡ-ಮರಗಳಿವೆ. ನಾನು ಪರಿಸರ ಪ್ರೇಮಿ. ಹಾಗಾಗಿ ಅವುಗಳನ್ನು ಕಡಿಯುವುದಕ್ಕೆ ಹೇಳುವುದಿಲ್ಲ. ಸ್ವಚ್ಛತೆ ಕಾಪಾಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡುತ್ತೇನೆ. ರಾತ್ರಿ ವೇಳೆ ಸಾರ್ವಜನಿಕರಿಗೆ ಅನುಕೂಲವಾಗುವಂತೆ ಬೀದಿ ದೀಪ ಇತರೆ ಅಗತ್ಯ ಸೌಲಭ್ಯಗಳನ್ನು ಹಂತಹಂತವಾಗಿ ಕೈಗೊಳ್ಳಲಾಗುವುದು’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿರು.
ಥೀಂ ಪಾರ್ಕ್ ಪ್ರವೇಶ ಶುಲ್ಕ ಇತರೆ ವಿಷಯಗಳ ಬಗ್ಗೆ ದಾವಣಗೆರೆ ವಿಶ್ವವಿದ್ಯಾಲಯದ ಕುಲಪತಿ, ಕುಲಸಚಿವರು, ಸಿಂಡಿಕೇಟ್ ಸದಸ್ಯರು ಚರ್ಚಿಸುವರು ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಉಪ ಮೇಯರ್ ಯಶೋಧ ಯೋಗೇಶ್, ಪಾಲಿಕೆ ವಿರೋಧ ಪಕ್ಷದ ನಾಯಕ ಕೆ. ಪ್ರಸನ್ನ ಕುಮಾರ್, ಮಾಜಿ ಮೇಯರ್ ಎಸ್. ಟಿ. ವೀರೇಶ್, ಸದಸ್ಯರಾದ ವೀಣಾ ನಂಜಪ್ಪ, ಸೋಗಿ ಶಾಂತಕುಮಾರ್, ಗಾಯತ್ರಿಬಾಯಿ ಖಂಡೋಜಿರಾವ್, ಮಾಜಿ ಸದಸ್ಯರಾದ ಎಚ್.ಎನ್. ಶಿವಕುಮಾರ್, ಶಿವನಗೌಡ ಟಿ. ಪಾಟೀಲ್, ಧೂಡಾ ಮಾಜಿ ಅಧ್ಯಕ್ಷರಾದ ಯಶವಂತರಾವ್ ಜಾಧವ್, ರಾಜನಹಳ್ಳಿ ಶಿವಕುಮಾರ್, ಮುಖಂಡರಾದ ಶಿವಾಜಿ ಪಾಟೀಲ್, ಭಾಗ್ಯ ಪಿಸಾಳೆ, ಗಂಗಾಧರ್, ವೆಂಕಟೇಶ್, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಶ್ರೀನಿವಾಸ್ ದಾಸಕರಿಯಪ್ಪ, ಜಿಲ್ಲಾ ರೈತ ಮೋರ್ಚಾ ಅಧ್ಯಕ್ಷ ಲೋಕಿಕೆರೆ ನಾಗರಾಜ್, ಸಿಂಡಿಕೇಟ್ ಮಾಜಿ ಸದಸ್ಯ ಕೊಂಡಜ್ಜಿ ಜಯಪ್ರಕಾಶ್, ಸಿದ್ದೇಶ್, ಸುರೇಶ್ ಗಂಡಗಾಳೆ, ಕೆ.ಎನ್. ಹನುಮಂತಪ್ಪ, ಎಸ್.ಟಿ. ಯೋಗೇಶ್ವರ್, ನಗರಪಾಲಿಕೆ ಆಯುಕ್ತೆ ಜಿ. ರೇಣುಕಾ, ಸತೀಶ್ ವಲ್ಲೆಪುರೆ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.