ಕಲಘಟಗಿಯಿಂದಲೇ ಮತ್ತೆ ಸ್ಪರ್ಧಿಸುವೆ: ಸಂತೋಷ್ ಲಾಡ್

ಕಲಘಟಗಿ: ‘ಕ್ಷೇತ್ರದ ಜನರನ್ನು ಯಾವತ್ತೂ ಮರೆತಿಲ್ಲ. ಕಳೆದ ಚುನಾವಣೆಯಲ್ಲಿ ಸೋತ ನಂತರ ಆತ್ಮಾವಲೋಕನದಲ್ಲಿ ತೊಡಗಿದ್ದೆ. ಮುಂದಿನ ದಿನಗಳಲ್ಲಿ ಪಕ್ಷವನ್ನು ಇನ್ನಷ್ಟು ಬಲವಾಗಿ ಸಂಘಟಿಸಿ ಇದೇ ಕ್ಷೇತ್ರದಿಂದ ಸ್ಪರ್ಧೆ ಮಾಡುತ್ತೇನೆ’ ಎಂದು ಮಾಜಿ ಸಚಿವ ಸಂತೋಷ್ ಲಾಡ್ ಹೇಳಿದರು.
ಮಡಕಿಹೊನ್ನಿಹಳ್ಳಿಯ ತಮ್ಮ ನಿವಾಸದಲ್ಲಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದರು. ‘ಕಳೆದ 10 ವರ್ಷಗಳಲ್ಲಿ ಜನರಿಗಾಗಿ ಒಳ್ಳೆಯ ಕೆಲಸ ಮಾಡಿದ್ದೇನೆ. ಬೇಡ್ತಿ ಹಳ್ಳ ನೀರಾವರಿ ಯೋಜನೆ, ಬಸ್ ಡಿಪೊ ಕಾಮಗಾರಿ, ರೈತರಿಗೆ ಕೊಳವೆ ಬಾವಿ, ವಿದ್ಯುತ್ ತಂತಿ ಬದಲಾವಣೆ ಮುಂತಾದ ಜನಪರ ಕೆಲಸ ಮಾಡಿದ ತೃಪ್ತಿ ಇದೆ’ ಎಂದರು.
ಕಾಂಗ್ರೆಸ್ ಪಕ್ಷದಲ್ಲಿ ನಾಗರಾಜ ಛಬ್ಬಿ ಹಾಗೂ ಲಾಡ್ ಅವರ ಬಣಗಳಿವೆಯಲ್ಲ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ‘ಇಲ್ಲಿರುವುದು ಕಾಂಗ್ರೆಸ್ ಮಾತ್ರ, ಬಣಗಳಿಲ್ಲ. ಪಕ್ಷದ ಸಂಘಟನೆಗೆ ಎಲ್ಲರೂ ಶ್ರಮಿಸುತ್ತಿದ್ದಾರೆ. ಟಿಕೆಟ್ ನೀಡುವುದು ವರಿಷ್ಠರಿಗೆ ಬಿಟ್ಟ ವಿಷಯ’ ಎಂದರು.
‘ಬಿಜೆಪಿ ಕೇವಲ ಪ್ರಚಾರದಲ್ಲಿ ತೊಡಗಿದೆ. ಲಾಕ್ಡೌನ್ ಪರಿಣಾಮ ಲಕ್ಷಾಂತರ ಜನ ಕೆಲಸ ಕಳೆದುಕೊಂಡು ಬೀದಿಗೆ ಬಂದಿದ್ದಾರೆ. ಅವರಿಗೆ ಪರಿಹಾರ ನೀಡುವ ಕೆಲಸ ಆಗುತ್ತಿಲ್ಲ’ ಎಂದು ದೂರಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.