ಹುಬ್ಬಳ್ಳಿ: ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಲು ಮುಹೂರ್ತ ಸಮೀಪಿಸುತ್ತಿದ್ದಂತೆ ನಗರದ ಆರ್ ಎಸ್ಎಸ್ ಕಚೇರಿ ಕೇಶವಕುಂಜದಲ್ಲಿ ಸಡಗರದ ವಾತಾವರಣ ನಿರ್ಮಾಣವಾಗಿತ್ತು.
ಈ ಐತಿಹಾಸಿಕ ಕ್ಷಣವನ್ನು ಸ್ಮರಣೀಯವಾಗಿರಿಸಲು ದಿನಪೂರ್ತಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಮಂಗಳವಾರ ರಾತ್ರಿಯೇ ಕೇಶವ ಕುಂಜವನ್ನು ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು. ಬೆಳಿಗ್ಗೆಯಿಂದಲೆ ರಾಮ ನಾಮ ಪಠಣ, ಭಜನೆಗಳು ನಡೆಯುತ್ತಿವೆ. ಸಂಜೆ ಆರು ಗಂಟೆಗೆ ದೀಪೋತ್ಸವ ಜರುಗಲಿದೆ.
ಬಾಳೆದಿಂಡು, ಭಗವಾಧ್ವಜ, ಬಣ್ಣಬಣ್ಣದ ಹಾಳೆಗಳಿಂದ ಕಚೇರಿಯನ್ನು ಅಲಂಕರಿಸಲಾಗಿದೆ. ಬೆಳಿಗ್ಗೆ ಎಂಟು ಗಂಟೆಯಿಂದ ಕಾರ್ಯಕ್ರಮ ಆರಂಭವಾಗಿದ್ದು, ಕೊರೊನಾ ಸೋಂಕಿನ ಭೀತಿ ಇರುವ ಕಾರಣ ಸಾರ್ವಜನಿಕರ ಪ್ರವೇಶಕ್ಕೆ ನಿಷೇಧ ಹೇರಲಾಗಿದೆ. ಕಚೇರಿಯ ಸಿಬ್ಬಂದಿ ಹಾಗೂ ಕೆಲ ಆರ್ ಎಸ್ಎಸ್ ಪ್ರಮುಖರಷ್ಟೇ ಪಾಲ್ಗೊಂಡಿದ್ದಾರೆ.
ಸಂಘದ ಹಿರಿಯ ಪ್ರಚಾರಕ ಸು. ರಾಮಣ್ಣ, ಅಖಿಲ ಭಾರತೀಯ ವ್ಯವಸ್ಥಾ ಪ್ರಮುಖ ಮಂಗೇಶ ಭೇಂಡೆ ಭಾಗವಹಿಸಿದ್ದಾರೆ.