ಹುಬ್ಬಳ್ಳಿ: ಬದಲಾದ ಪರಿಸ್ಥಿತಿಯಲ್ಲಿ ವಿದ್ಯಾರ್ಥಿಗಳು ಸಂಯೋಜಿತ ಕಲಿಕೆ ರೂಢಿಸಿಕೊಳ್ಳುವುದು ಅನಿವಾರ್ಯವಾಗಿದೆ ಎಂದು ಕೆ.ಎಲ್.ಇ. ತಾಂತ್ರಿಕ ವಿಶ್ವವಿದ್ಯಾಲಯದ ಕುಲಪತಿ ಡಾ. ಅಶೋಕ ಶೆಟ್ಟರ್ ಸಲಹೆ ನೀಡಿದರು.
ಕೆ.ಎಲ್.ಇ ಸಂಸ್ಥೆಯ ಕಾಡಸಿದ್ಧೇಶ್ವರ ಕಲಾ ಮಹಾವಿದ್ಯಾಲಯ ಮತ್ತು ಎಚ್.ಎಸ್.ಕೆ. ವಿಜ್ಞಾನ ಸಂಸ್ಥೆಯಲ್ಲಿ ಶನಿವಾರ ವರ್ಚುವಲ್ ಲ್ಯಾಬ್ ಉದ್ಘಾಟಿಸಿ ಮಾತನಾಡಿ ‘ಸಂಯೋಜಿತ ಕಲಿಕೆ ಎಂದರೆ ವಿದ್ಯಾರ್ಥಿಗಳು ಆಯಾ ವಿಷಯದ ಕೆಲವು ಅಂಶ ಭೌತಿಕ ತರಗತಿಯಲ್ಲಿ ಮತ್ತು ಕೆಲವು ಅಂಶ ಆನ್ಲೈನ್ ಮೂಲಕ ಕಲಿಯುತ್ತಾರೆ. ಹೀಗಾಗಿ ವಿದ್ಯಾರ್ಥಿಗಳಲ್ಲಿ ಕಲಿಯುವ ಆಸಕ್ತಿ ಮೂಡುತ್ತದೆ’ ಎಂದರು.
‘ಕೋವಿಡ್ ಕಾರಣಕ್ಕೆ ವರ್ಚುವಲ್ ಲ್ಯಾಬ್ ಮಾಡಲಾಗುತ್ತಿದೆ ಎಂದು ಭಾವಿಸಬೇಡಿ. ಇದು ಮುಂದುವರಿಲಿದ್ದು, ಭವಿಷ್ಯದಲ್ಲಿ ಇದರ ಬಳಕೆ ಇನ್ನೂ ಹೆಚ್ಚಾಗಲಿದೆ. ದೂರದಲ್ಲಿರುವ ಮತ್ತು ಗ್ರಾಮೀಣ ಪ್ರದೇಶಗಳಲ್ಲಿರುವ ವಿದ್ಯಾರ್ಥಿಗಳು ಇಂಥ ಶಿಕ್ಷಣದಿಂದ ವಂಚಿತರಾಗಿದ್ದಾರೆ. ಹೀಗಾಗಿ ಅವರು ಇದರ ಪ್ರಯೋಜನ ಪಡೆದುಕೊಳ್ಳಬೇಕು’ ಎಂದರು.
ಸುರತ್ಕಲ್ನ ಎನ್.ಐ.ಟಿಯ ಸಿಸ್ಟಮ್ ಡಿಸೈನ್ ವಿಭಾಗದ ಮುಖ್ಯಸ್ಥ ಡಾ. ಗಂಗಾಧರನ್ ಕೆ.ವಿ. ’ವಿಷಯವನ್ನು ಕೇವಲ ಓದುವುದಕ್ಕಷ್ಟೇ ಸೀಮಿತಗೊಳಿಸದೇ ಪ್ರಯೋಗ ಮಾಡಿಯೂ ಕಲಿಯಬೇಕು’ ಎಂದರು.
ಬೆಂಗಳೂರಿನ ರೇವಾ ವಿಶ್ವವಿದ್ಯಾಲಯದ ಕುಲಪತಿ ಡಾ. ಶ್ಯಾಮರಾಜು, ಕೆ.ಎಲ್.ಇ ಸಂಸ್ಥೆಯ ಸ್ಥಳೀಯ ಆಡಳಿತ ಮಂಡಳಿಯ ಸದಸ್ಯರಾದ ಬಸವರಾಜ ಎಸ್. ಪಟ್ಟೇದ ಮತ್ತು ಮಹಾಂತೇಶ ನೂಲ್ವಿ , ತಾಂತ್ರಿಕ ಸಮಿತಿಯ ಡಾ. ಎಂ.ಅರ್ಚನಾ ಮತ್ತು ಡಾ. ಎಂ.ಬಿ. ಸಿದ್ಧೇಶ ಪಾಲ್ಗೊಂಡಿದ್ದರು.
ಕಾಲೇಜಿನ ಭೌತಶಾಸ್ತ್ರ ವಿಭಾಗದ ಪ್ರೊ. ಜಯಶ್ರೀ ಬಿರಾದಾರ, ರಸಾಯನಶಾಸ್ತ್ರ ವಿಭಾಗದ ಡಾ.ಎನ್.ಜಿ. ನಾಗವೇಣಿ, ಪ್ರಾಚಾರ್ಯೆ ಡಾ.ಉಮಾ ವಿ. ನೇರ್ಲೆ, ಇಂಗ್ಲಿಷ್ ವಿಭಾಗದ ಮುಖ್ಯಸ್ಥೆ ಪ್ರೊ. ಸುಜಾತಾ ಪಟ್ಟೇದ, ಐ.ಕ್ಯು.ಎ.ಸಿ. ಸಂಚಾಲಕ ಪ್ರೊ.ಸುಭಾಸ್ ಎನ್. ಎಮ್ಮಿ ಪಾಲ್ಗೊಂಡಿದ್ದರು.