ಕಲಘಟಗಿ: ಹುಬ್ಬಳ್ಳಿ–ಕಾರವಾರ ರಾಷ್ಟೀಯ ಹೆದ್ದಾರಿ ರಸ್ತೆ ಮಧ್ಯೆಭಾಗದ ಸಿಮೆಂಟ್ ಹಾಗೂ ಡಾಂಬರ್ ಕಿತ್ತು ಕಬ್ಬಿಣದ ರಾಡುಗಳು ಹೊರ ಬರುತ್ತಿದ್ದು, ವಾಹನ ಸವಾರರ ಜೀವಕ್ಕೆ ಕುತ್ತು ತಂದಿವೆ.
ಐದು ವರ್ಷದ ಹಿಂದೆ ₹ 37 ಕೋಟಿ ಅನುದಾನದಲ್ಲಿ 4.ಕಿ.ಮೀ ಉದ್ದದ ರಸ್ತೆ ಕಾಮಗಾರಿ ಸಂಪೂರ್ಣ ಮುಕ್ತಾಯವಾಗಿದೆ. ಪಟ್ಟಣದ ಹೊರವಲಯದ ತಡಸ ಕ್ರಾಸ್ ಬಳಿ ಇರುವ ಸೇತುವೆ ಹತ್ತಿರ ಅಲ್ಲಲ್ಲಿ ರಸ್ತೆ ಕಳಪೆಮಟ್ಟದಿಂದ ಕೂಡಿದ್ದರಿಂದ 1 ವರ್ಷದಲ್ಲಿ ಕಾಂಕ್ರೀಟ್ ರಸ್ತೆ ಹದಗೆಟ್ಟು ತೆಗ್ಗು ಗುಂಡಿಗಳು ಬಿದ್ದು ಕೆಲವೊಂದು ಕಡೆ ಕಬ್ಬಿಣದ ರಾಡು ಹೊರಗೆ ಕಾಣುತ್ತಿವೆ. ದ್ವಚಕ್ರ ವಾಹನ ಸವಾರರ ಜೀವಕ್ಕೆ ಅಪಾಯ ಉಂಟು ಮಾಡುತ್ತಿದ್ದರೆ, ಬೃಹತ್ ವಾಹನಗಳ ಟೈರ್ಗಳು ಹಾಳಾಗುತ್ತಿವೆ. ಈ ಕುರಿತು ಸಂಬಂಧಿಸಿದ ಹೆದ್ದಾರಿ ಅಧಿಕಾರಿಗಳು ಮಾತ್ರ ನಿರ್ಲಕ್ಷ್ಯ ವಹಿಸುತ್ತಿದ್ದಾರೆ ಎಂಬುವುದು ಚಾಲಕರ ಆರೋಪವಾಗಿದೆ.
ಕಳಪೆ ಮಟ್ಟದ ವಿದ್ಯುತ್ ಕಂಬ: ಕಲಘಟಗಿ ಪಟ್ಟಣದ ಉದ್ದಕ್ಕೂ ವಿದ್ಯುತ್ ಕಂಬಗಳು ಇದ್ದು, ಕೆಲವು ಕಂಬಗಳ ಬಲ್ಬ್ ಉದುರಿ ಹೋಗಿದ್ದರೆ, ಕೆಲವು ಕಡೆ ಮುರಿದು ಹೋಗಿವೆ. ಕಂಬಗಳು ಕೂಡಾ ಕಳಪೆ ಗುಣಮುಟ್ಟದಿಂದ ತುಕ್ಕು ಹಿಡಿಯುತ್ತಿವೆ. ಕಣ್ಣಿಗೆ ಕಂಡರೂ ಸರಿಪಡಿಸುವ ಗೋಜಿಗೆ ಹೋಗುತ್ತಿಲ್ಲ. ಅಲ್ಲದೆ ನಿತ್ಯ ಈ ಮಾರ್ಗಗಳು ಕತ್ತಲೆಯಿಂದ ಕೂಡಿರುತ್ತವೆ.
‘ಈ ಮಾರ್ಗದಲ್ಲಿ ನಿತ್ಯ ಸಾವಿರಾರು ವಾಹನಗಳು ಸಂಚರಿಸುತ್ತವೆ. ತೆಗ್ಗು, ದಿನ್ನೆಗಳು ಬಿದ್ದಿದ್ದು, ದುರಸ್ತಿ ಮಾಡಿಲ್ಲ. ಅಲ್ಲದೆ ರಸ್ತೆ ವಿಸ್ತರಣೆ ಮಾಡುವ ಸಂದರ್ಭದಲ್ಲಿ ನೂರಾರು ಮರಗಳನ್ನು ಕಡಿಯಲಾಗಿದೆ. ಬೃಹತ್ ಮರಗಳು ಕಡಿದು ಹಾಕಲಾಗಿದ್ದರೂ ಒಂದೇ ಒಂದು ಸಸಿ ನೆಟ್ಟಿಲ್ಲ’ ಎಂದು ಯುವ ಮುಖಂಡ ಸುನಿಲ್ ಕಮ್ಮಾರ ಆಕ್ರೋಶದಿಂದ ಹೇಳುತ್ತಾರೆ.
ವಾಹನ ಸವಾರರಿಗೆ ಎಚ್ಚರಿಕೆ ನಾಮಫಲಕ ಇಲ್ಲ ಕಡಿದ ಮರಗಳ ಬದಲಿ ಒಂದೇ ಒಂದು ಸಸಿ ನೆಟ್ಟಿಲ್ಲ ಹೆದ್ದಾರಿ ಅಧಿಕಾರಿಗಳ ನಿರ್ಲಕ್ಷ್ಯ: ಆರೋಪ
ರಸ್ತೆಯಲ್ಲಿ ಬಿದ್ದಿರುವ ತೆಗ್ಗು ಗುಂಡಿಗಳನ್ನು ಮುಚ್ಚಲು ಕ್ರಮಕೈಗೊಳ್ಳಲಾಗುತ್ತದೆ. ಹೆದ್ದಾರಿಯಲ್ಲಿನ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಲಾಗುವುದುಹರೀಶ್ ಬಂಡಿವಡ್ಡರ ಎಇಇ ರಾ.ಹೆ. ವಿಭಾಗ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.