ಹುಬ್ಬಳ್ಳಿ: ನಗರದ ಗಿರಣಿ ಚಾಳದಲ್ಲಿ ಸೋಮವಾರ ಕರ್ತವ್ಯದಲ್ಲಿದ್ದ ವೇಳೆ ಹುಬ್ಬಳ್ಳಿ–ಧಾರವಾಡ ಮಹಾನಗರ ಪಾಲಿಕೆಯ ಗುತ್ತಿಗೆ ಪೌರಕಾರ್ಮಿಕ ಪ್ರಕಾಶ ಚಿಕ್ಕತುಂಬಳ (40) ಮೃತಪಟ್ಟಿದ್ದಾರೆ.
45ನೇ ವಾರ್ಡ್ ವ್ಯಾಪ್ತಿಯಲ್ಲಿ ಕೆಲಸ ಮಾಡುವ ವೇಳೆ ತೀವ್ರ ಎದೆನೋವಿನಿಂದ ಬಳಲಿದ ಪ್ರಕಾಶ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುವ ಮಾರ್ಗ ಮಧ್ಯದಲ್ಲಿ ಮೃತಪಟ್ಟರು. ಮೃತರಿಗೆ ಪತ್ನಿ, ಪುತ್ರ ಹಾಗೂ ಪುತ್ರಿ ಇದ್ದಾರೆ.
ಕರ್ತವ್ಯದ ವೇಳೆ ಮೃತಪಟ್ಟರೂ ಪಾಲಿಕೆಯ ಯಾವ ಅಧಿಕಾರಿಗಳು ಕೂಡ ಬಂದಿಲ್ಲ ಎಂದು ಆರೋಪಿಸಿ ಮೃತವ್ಯಕ್ತಿಯ ಕುಟುಂಬದ ಸದಸ್ಯರು ಹಾಗೂ ಪೌರ ಕಾರ್ಮಿಕರ ಸಂಘದ ಪದಾಧಿಕಾರಿಗಳು ಆಕ್ರೋಶ ವ್ಯಕ್ತಪಡಿಸಿದರು. ಸಂಜೆ ವೇಳೆ ಮೃತದೇಹವನ್ನು ಮಹಾನಗರ ಪಾಲಿಕೆಯ ಆವರಣದೊಳಗೆ ತೆಗೆದುಕೊಂಡು ಹೋದರು.
ಈ ವೇಳೆ ಮಾತನಾಡಿದ ಕಾಂಗ್ರೆಸ್ ಮುಖಂಡ ಮೋಹನ ಹಿರೇಮನಿ ‘ಪ್ರಕಾಶ ಅವರ ಕುಟುಂಬಕ್ಕೆ ಸರ್ಕಾರದಿಂದ ಪರಿಹಾರ ಕೊಡಿಸಬೇಕು. ಅವರ ಪತ್ನಿಗೆ ಅನುಕಂಪದ ಆಧಾರದ ಮೇಲೆ ನೌಕರಿ ನೀಡಬೇಕು’ ಎಂದು ಆಗ್ರಹಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಮಹಾನಗರ ಪಾಲಿಕೆ ಆಯುಕ್ತ ಸುರೇಶ ಇಟ್ನಾಳ ‘ಪೌರ ಕಾರ್ಮಿಕರನ್ನು ಕೇಂದ್ರ ಸರ್ಕಾರ ಕೊರೊನಾ ವಾರಿಯರ್ ಎಂದು ಪರಿಗಣಿಸಿದೆ. ಸರ್ಕಾರದ ನಿಯಮದಿಂದ ₹50 ಲಕ್ಷ ಪರಿಹಾರ ನೀಡಲು ಕ್ರಮ ಕೈಗೊಳ್ಳಲಾಗುವುದು. ಪತ್ನಿಗೆ ನೌಕರಿ ನೀಡುವ ಬಗ್ಗೆ ಪರಿಶೀಲಿಸಲಾಗುವುದು’ ಎಂದರು.