ಧಾರವಾಡ: ತಾಲ್ಲೂಕಿನ ಮನಸೂರಿನ ಕರಿಯಮ್ಮ ಗುಡಿ ಸಮೀಪದ ಕೊಟ್ಟಿಗೆಗೆ ಚಿರತೆ ನುಗ್ಗಿ ಹಸುವೊಂದನ್ನು ಗುರುವಾರ ರಾತ್ರಿ ಕೊಂದಿದೆ. ಇದು ಗ್ರಾಮಸ್ಥರಲ್ಲಿ ಆತಂಕ ಮೂಡಿದೆ.
ಗ್ರಾಮದ ಹೊಲದಲ್ಲಿ ಚಿರತೆ ಸಾಗಿದ್ದನ್ನು ಗ್ರಾಮಸ್ಥರೊಬ್ಬರು ನೋಡಿದ್ದಾರೆ. ಅರಣ್ಯ ಸಿಬ್ಬಂದಿ ಸ್ಥಳ ಪರಿಶೀಲಿಸಿ, ಚಿರತೆ ಚಲನವಲನಗಳ ಮೇಲೆ ನಿಗಾ ಇಟ್ಟಿದ್ದಾರೆ.
‘ಹೊಲದ ಕಣದಲ್ಲಿ ಬಣವೆ ಮೇಲೆ ಮಲಗಿದ್ದೆ. ರಾತ್ರಿ 3 ಗಂಟೆ ವೇಳೆಯಲ್ಲಿ ಪ್ರಾಣಿಯೊಂದು ಓಡುವ ಸದ್ದು ಕೇಳಿಸಿತು. ಕೆಳಗೆ ನೋಡಿದಾಗ ಚಿರತೆ ಓಡಿದ್ದು ಕಾಣಿಸಿತು’ ಎಂದು ಮನಸೂರಿನ ಕುಬೇರಪ್ಪ ಮಡಿವಾಳರ ‘ಪ್ರಜಾವಾಣಿ‘ಗೆ ತಿಳಿಸಿದರು.
‘ಚಿರತೆ ಓಡಾಡಿರುವ ಜಾಗ ಪರಿಶೀಲಿಸಲಾಗಿದೆ. ಚಿರತೆ ಸೆತೆ ಹಿಡಿಯಲು ಆ ಭಾಗದಲ್ಲಿ ಬೋನು ಇಡಲಾಗುವುದು’ ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ತಿಳಿಸಿದರು.