ಧಾರವಾಡ: ತಾಲ್ಲೂಕಿನ ತಡಕೋಡ ಗ್ರಾಮಕ್ಕೆವಸತಿ ಯೋಜನೆ ಅಡಿ ಹೆಚ್ಚುವರಿ 150 ಮನೆಗಳನ್ನು ನೀಡುವಂತೆ ಆಗ್ರಹಿಸಿ, ಗ್ರಾಮ ಪಂಚಾಯ್ತಿ ಸದಸ್ಯ ಭೀಮಪ್ಪ ಕಾಸಾಯಿ ನೇತೃತ್ವದಲ್ಲಿ ಗ್ರಾಮಸ್ಥರು ಬುಧವಾರ ಜಿಲ್ಲಾ ಪಂಚಾಯ್ತಿ ಸಿಇಒ ಡಾ. ಬಿ.ಸುಶೀಲಾ ಅವರಿಗೆ ಮನವಿ ಸಲ್ಲಿಸಿದರು.
‘ತಡಕೋಡ ಗ್ರಾಮವು ಸೇರಿದಂತೆ ಧಾರವಾಡ ತಾಲ್ಲೂಕಿನ ಎಲ್ಲ ಗ್ರಾಮಗಳ ಜನಸಂಖ್ಯೆಗೆ ಅನುಗುಣವಾಗಿ ವಸತಿ ಮನೆಗಳನ್ನು ಮಂಜೂರು ಮಾಡಬೇಕಿದ್ದ ಸರ್ಕಾರ, ಎಲ್ಲ ಗ್ರಾಮಗಳಿಗೆ ಕಡಿಮೆ ಮನೆಗಳನ್ನು ಹಂಚಿಕೆ ಮಾಡಿರುವುದು ಅವೈಜ್ಞಾನಿಕ ಮತ್ತು ಅಸಮರ್ಪಕ ಕ್ರಮವಾಗಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.
‘ಕಳೆದ ನಾಲ್ಕು ವರ್ಷಗಳಿಂದ ಯಾವುದೇ ಯೋಜನೆ ಅಡಿ ವಸತಿ ಮನೆಗಳು ಮಂಜೂರಾಗಿಲ್ಲ. ಕಳೆದ ಎರಡು ವರ್ಷಗಳಿಂದ ಅತಿವೃಷ್ಟಿಯಿಂದಾಗಿ ಅನೇಕರು ವಸತಿ ರಹಿತರಾಗಿದ್ದು, ಅಂತಹ ಅರ್ಹರಿಗೆ ವಸತಿ ಮನೆಗಳ ಹಂಚಿಕೆಯಾಗಿಲ್ಲ’ ಎಂದರು.
‘ಸರ್ಕಾರವು ಪ್ರಸ್ತುತ ವಿವಿಧ ಯೋಜನೆಗಳ ಅಡಿ ನೀಡುತ್ತಿರುವ ಮನೆಗಳ ಸಂಖ್ಯೆಗೂ ಫಲಾನುಭವಿಗಳ ಸಂಖ್ಯೆಗೂ ಅಜಗಜಾಂತರವಿದೆ. ಸರ್ಕಾರವು ಇದರ ಕುರಿತು ಗಮನ ಹರಿಸಿ ಅಗತ್ಯವಿರುವ ಹೆಚ್ಚುವರಿ ಮನೆಗಳನ್ನುಪ್ರಸಕ್ತ ಹಣಕಾಸಿನ ವರ್ಷದಲ್ಲಿಯೇ ಮಂಜೂರು ಮಾಡಬೇಕು’ ಎಂದು ಒತ್ತಾಯಿಸಿದರು.
ಪ್ರಕಾಶ ಹೂಗಾರ, ನೀಲಕಂಠ ಕಲ್ಲೂರ, ಮಂಜುಳಾ ಹೂಲಮನಿ, ಮಾರುತಿ ಭಾಂಗಡೆ, ಗ್ರಾಮಸ್ಥರು ಇದ್ದರು.