ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಬ್ಬಳ್ಳಿ: ಅಪರಾಧ ಪ್ರಕರಣಗಳ ಹೆಚ್ಚಳ; ಸಂಶಯಾಸ್ಪದ ವ್ಯಕ್ತಿಗಳ ಬೆರಳಚ್ಚು ಸಂಗ್ರಹ

ಹೊರ ರಾಜ್ಯದ ಬೀದಿಬದಿ ವ್ಯಾಪಾರಸ್ಥರ ಬೆನ್ನು ಬಿದ್ದ ಪೊಲೀಸರು
Last Updated 8 ಏಪ್ರಿಲ್ 2022, 6:23 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಸಾಕಷ್ಟು ಸುರಕ್ಷತಾ ಕ್ರಮಗಳ ನಡುವೆಯೂ ಹು-ಧಾ ಕಮಿಷನರೇಟ್‌ನಲ್ಲಿ ಹೆಚ್ಚುತ್ತಿರುವ ಅಪರಾಧ ಕೃತ್ಯಗಳನ್ನು ಶೀಘ್ರವೇ ಪತ್ತೆ ಹಚ್ಚಲು, ಸಂಶಯಾಸ್ಪದ ವ್ಯಕ್ತಿಗಳ ಬೆರಳಚ್ಚು ಸಂಗ್ರಹಕ್ಕೆ ಪೊಲೀಸರು ಮುಂದಾಗಿದ್ದಾರೆ.

ಕಮಿಷನರೇಟ್‌ನ ವಿವಿಧ ಠಾಣೆಗಳ ವ್ಯಾಪ್ತಿಯಲ್ಲಿ ಸಂಶಯಾಸ್ಪದವಾಗಿ ಓಡಾಡುವ ವ್ಯಕ್ತಿಗಳ, ರಾತ್ರಿ ವೇಳೆ ಅನುಮಾನಾಸ್ಪದವಾಗಿ ಒಡಾಡುವ (ಕಾಗ್ನೇಜಿಬಲ್‌ ಪ್ರಕರಣ) ವ್ಯಕ್ತಿಗಳನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿ, ಬೆರಳಚ್ಚು ಸಂಗ್ರಹಿಸುತ್ತಿದ್ದಾರೆ. ಮುಖ್ಯವಾಗಿ, ರಾಜಸ್ಥಾನ, ಬಿಹಾರ, ಮಧ್ಯಪ್ರದೇಶಗಳಿಂದ ವಲಸೆ ಬಂದ ಬೀದಿಬದಿ ವ್ಯಾಪಾರಸ್ಥರ ಬೆರಳಚ್ಚು ಕಲೆಹಾಕುವಲ್ಲಿ ನಿರತರಾಗಿದ್ದಾರೆ.

ಈಗಾಗಲೇ ಉಪನಗರ, ಶಹರ, ಕೇಶ್ವಾಪುರ, ಗೋಕುಲ, ವಿದ್ಯಾನಗರ, ಹಳೇಹುಬ್ಬಳ್ಳಿ, ವಿದ್ಯಾಗಿರಿ, ನವನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಕಾರ್ಯಕ್ಕೆ ಚಾಲನೆ ನೀಡಲಾಗಿದೆ. ಕಮಿಷನರೇಟ್‌ನ ಬಹುತೇಕ ಎಲ್ಲ ಠಾಣೆಗಳಲ್ಲೂ ಬೆರಳಚ್ಚು ಸಂಗ್ರಹ ಯಂತ್ರವಿದ್ದು, ಈವರೆಗೆ 200ಕ್ಕೂ ಹೆಚ್ಚು ಅನುಮಾನಾಸ್ಪದ ವ್ಯಕ್ತಿಗಳ ಮಾದರಿ ಸಂಗ್ರಹಿಸಲಾಗಿದೆ.

ಬೆರಳಚ್ಚು ಯಂತ್ರದ ಸಹಾಯ ದಿಂದ ಕೆಲವೇ ನಿಮಿಷಗಳಲ್ಲಿ ಆರೋಪಿಯ ಎಲ್ಲಾಬೆರಳಚ್ಚು ಸಂಗ್ರಹಿಸಲಾಗುತ್ತಿದೆ. ಆರೋಪಿಯನ್ನು ವಶಕ್ಕೆ ಪಡೆದ ನಂತರ ಅವನ ಬೆರಳಚ್ಚು ಪಡೆದು ಹೋಲಿಕೆ ಮಾಡಲಾಗುತ್ತದೆ. ಇದರಿಂದ ಆರೋಪಿ ಪತ್ತೆ ಸುಲಭವಾಗುತ್ತದೆ ಎಂದು ಪೊಲೀಸರು ಹೇಳುತ್ತಾರೆ.

ಅಪರಾಧ ನಡೆದ ಸ್ಧಳದಲ್ಲಿ ಬೆರಳಚ್ಚು ಪತ್ತೆಯಾದರೆ, ಅದನ್ನು ಮೊದಲು ಆಯಾ ಠಾಣೆಯಲ್ಲಿ ಪರಿಶೀಲಿಸಲಾಗುತ್ತದೆ. ಅಲ್ಲಿ ಬೆರಳಚ್ಚು ಹೋಲಿಕೆಯಾಗದಿದ್ದರೆ, ಸುತ್ತಲಿನ‌ ಠಾಣೆಗಳಿಗೆ‌ ಕಳುಹಿಸಲಾಗುತ್ತದೆ. ಅಲ್ಲಿಯೂ ಮಾಹಿತಿ ಲಭ್ಯವಾಗದಿದ್ದರೆ ಬೆಂಗಳೂರು ಮತ್ತು ದೆಹಲಿಯಲ್ಲಿರುವ ಬೆರಳಚ್ಚು ಘಟಕಕ್ಕೆ ಕಳುಹಿಸಲಾಗುತ್ತದೆ.

ಹುಬ್ಬಳ್ಳಿ ಹಾಗೂ ಬೆಳಗಾವಿಯಲ್ಲಿ ಇತ್ತೀಚೆಗೆ ಮೂರು ಮನೆಗಳ ಕಳವು ಪ್ರಕರಣ ದಾಖಲಾಗಿದ್ದವು. ಕೃತ್ಯ ನಡೆದ ಮೂರೂ ಸ್ಥಳಗಳಲ್ಲಿ ಒಂದೇ ವ್ಯಕ್ತಿಯ ಬೆರಳಚ್ಚು ಇರುವುದು ಬೆಂಗಳೂರಿನ ಬೆರಳಚ್ಚು ಘಟಕದಲ್ಲಿ ಪತ್ತೆಯಾಗಿತ್ತು. ದೆಹಲಿಯಲ್ಲಿರುವ ಬೆರಳಚ್ಚು ಘಟಕಕ್ಕೆ ಅದನ್ನು ಕಳುಹಿಸಿದಾಗ ಆರೋಪಿ ರಾಜಸ್ಥಾನದವನು ಎನ್ನುವುದು ತಿಳಿದು ಬಂದಿತ್ತು. ಅದನ್ನಾಧರಿಸಿಯೇ, ಕೇಶ್ವಾಪುರ ಠಾಣೆ ಪೊಲೀಸರು ವಾರದ ಹಿಂದೆ ರಾಜಸ್ಥಾನದಿಂದ ಮೂವರು ಆರೋಪಿತರನ್ನು ಬಂಧಿಸಿದ್ದಾರೆ ಎನ್ನುತ್ತಾರೆ ಪೊಲೀಸರು.

ಬಂಧಿತ ಮೂವರು ಆರೋಪಿತರಲ್ಲಿ ಸೋನು ಎಂಬಾತನ ಮೇಲೆ ರಾಜಸ್ಥಾನದಲ್ಲಿ ಸಾಕಷ್ಟು ಕಳವು ಪ್ರಕರಣ ದಾಖಲಾಗಿವೆ. ಅವನು ಎರಡು-ಮೂರು ಬಾರಿ ಜೈಲು ಶಿಕ್ಷೆ ಅನುಭವಿಸಿದ್ದಾನೆ. ದೆಹಲಿಯ ಬೆರಳಚ್ಚು ಘಟಕದಲ್ಲಿ ಅವನ ಬೆರಳಚ್ಚು ಹೋಲಿಕೆಯಾಗಿತ್ತು. ಇದರಿಂದ ಆರೋಪಿಯನ್ನು ಸುಲಭವಾಗಿ ಪತ್ತೆಹಚ್ಚಿ, ಚಿನ್ನಾಭರಣ ವಶಪಡಿಸಿಕೊಳ್ಳಲು ಸಾಧ್ಯವಾಯಿತು ಎಂದು ಕೇಶ್ವಾಪುರ ಠಾಣೆ ಪೊಲೀಸರು ಹೇಳುತ್ತಾರೆ.

ಬೆರಳಚ್ಚು; ಆರೋಪಿ ಪತ್ತೆಗೆ ಸಹಕಾರಿ

‘ರಾಜಸ್ಥಾನ ಹಾಗೂ ಹೊರ ರಾಜ್ಯದಿಂದ ಬಂದ ಅನುಮಾನಾಸ್ಪದ ನಡವಳಿಕೆ ಕಂಡು ಬಂದ ಬೀದಿ ಬದಿ ವ್ಯಾಪಾರಸ್ಥರ ಹಾಗೂ ಭಿಕ್ಷುಕರ ಬೆರಳಚ್ಚು ಸಂಗ್ರಹಿಸಲಾಗುತ್ತಿದೆ. ಕೆಲವು ಅಪರಾಧ ಪ್ರಕರಣಗಳಲ್ಲಿ ಅವರು ಭಾಗಿಯಾಗಿರುವ ಮಾಹಿತಿಯಿದೆ. ಬೆರಳಚ್ಚು ಸಂಗ್ರಹದಿಂದ ಆರೋಪಿ ಪತ್ತೆಗೆ ಸಹಕಾರಿಯಾಗುತ್ತದೆ’ ಎಂದು‌ ಇನ್‌ಸ್ಪೆಕ್ಟರ್‌ ಜಗದೀಶ ಹಂಚಿನಾಳ ‘ಪ್ರಜಾವಾಣಿ’ಗೆ ತಿಳಿಸಿದರು.

ಮುಖ್ಯಾಂಶಗಳು

ಬೆರಳಚ್ಚಿನಿಂದ ಆರೋಪಿ ಪತ್ತೆ ಸುಲಭ

ಬೆರಳಚ್ಚು ಸಂಗ್ರಹಕ್ಕೆ ಚಾಲನೆ

200ಕ್ಕೂ ಹೆಚ್ಚು ಮಂದಿ ಬೆರಳಚ್ಚು ಮಾಹಿತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT