ಕುಂದಗೋಳ: ತಾಲ್ಲೂಕಿನ ಚಾಕಲಬ್ಬಿ ಗ್ರಾಮದ ಗುರುವಾರ ರಾತ್ರಿ ಗೂಗಿಹಳ್ಳಕ್ಕೆ ಪ್ರವಾಹ ಬಂದು ಐದು ತಾಸು ಸಂಚಾರ ಬಂದ್ ಆಗಿದ್ದು, ಜನರನ್ನು ಪರದಾಡುವಂತೆ ಮಾಡಿತು.
ಈ ಭಾಗದಲ್ಲಿ ಮಳೆಯಾಗದೇ ಇದ್ದರೂ ಲಕ್ಷ್ಮೇಶ್ವರ, ಮುಂಡರಗಿ ಭಾಗದಲ್ಲಿ ವ್ಯಾಪಕ ಮಳೆಯಿಂದ ಹಳ್ಳಕ್ಕೆ ಪ್ರವಾಹ ಬಂದಿತ್ತು. ಇದರಿಂದ ಈ ಭಾಗದಲ್ಲಿ ಸಂಚರಿಸುವ ಬಸ್ ಸೇರಿದಂತೆ ಖಾಸಗಿ ವಾಹನಗಳು ಸಂಜೆ 5ರಿಂದ 9 ಗಂಟೆವರೆಗೆ ರಸ್ತೆಯಲ್ಲಿಯೇ ನಿಂತು ಬಿಟ್ಟವು.
ಶಾಲೆಯಿಂದ ತೆರಳುವ ಮಕ್ಕಳು, ಮಹಿಳಾ ಪ್ರಯಾಣಿಕರು ಪರದಾಡಿದರು.
ಈ ಸೇತುವೆ ದುರಸ್ತಿಗೆ ಶಾಸಕ ಎಂ.ಆರ್.ಪಾಟೀಲ, ಈ ಹಿಂದೆ ಬಿಜೆಪಿ ಸರ್ಕಾರದಿಂದ ₹ 50 ಲಕ್ಷ ಮಂಜೂರು ಮಾಡಿಸಿದ್ದರು. ಹಳ್ಳದ ಒಂದು ಬದಿ ಅಪಾರ ಪ್ರಮಾಣದ ಹೂಳು ಎತ್ತಿ ನೀರು ಸರಾಗವಾಗಿ ಹೋಗುವಂತೆ ಮಾಡಿದ್ದರು. ಈಗ ಮತ್ತೆ ಹೂಳು ತುಂಬಿಕೊಂಡು ಅಲ್ಪಮಳೆಯಾದರೂ ಸೇತುವೆ ಬಂದ್ ಆಗುವಂತೆ ಆಗಿದೆ. ಖರ್ಚು ಮಾಡಿದ ಹಣ ಕೂಡಾ ವ್ಯರ್ಥ್ಯವಾಗಿ ಹೋಗಿದೆ ಎಂದು ಗ್ರಾಮ ಪಂಚಾಯಿತಿ ಸದಸ್ಯ ವಿಠ್ಠಲ ಘಾಟಗೆ ಹೇಳಿದರು.
ರಾತ್ರಿ ಬಸ್ ಸೇತುವೆ ಬಳಿ ನಿಂತು ಹಳ್ಳದ ನೀರು ಕಡಿಮೆಯಾದ ಮೇಲೆ ಊರಿಗೆ ತೆರಳಿತು. ಸ್ಥಳಕ್ಕೆ ಪೊಲೀಸ್ ಸಿಬ್ಬಂದಿ ತೆರಳಿ ಪ್ರಯಾಣಿಕರನ್ನು ವಿಚಾರಿಸಿದರು. ಕೂಡಲೇ ಸಂಬಂಧಿಸಿದ ಅಧಿಕಾರಿಗಳು ಇತ್ತ ಗಮನ ಹರಿಸಿ ಸುಗಮ ಮತ್ತು ಸುರಕ್ಷಿತ ಸಂಚಾರಕ್ಕೆ ಅನುವು ಮಾಡಿಕೊಡಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದರು.
ಸರ್ಕಾರ ಅನುದಾನ ನೀಡಿದ್ದರೂ ಗುಣಮಟ್ಟದ ಕಾಮಗಾರಿಯಾಗಲಿಲ್ಲ. ಸಂಬಂಧಿಸಿದ ಲೋಕೋಪಯೋಗಿ ಇಲಾಖೆಯವರು ಗಮನಹರಿಸುತ್ತಿಲ್ಲ ಎಂದು ಪ್ರಯಾಣಿಕರು ಅಸಮಾಧಾನ ವ್ಯಕ್ತಪಡಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.