ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಬ್ಬಳ್ಳಿ: ಬಣ್ಣದಲ್ಲಿ ಮಿಂದೆದ್ದ ಹುಬ್ಬಳ್ಳಿ ಜನ...

ಹೋಳಿ ಹುಣ್ಣಿಮೆ ಹಬ್ಬದ ಅಂಗವಾಗಿ ಅದ್ಧೂರಿಯಾಗಿ ನಡೆದ ರಂಗಪಂಚಮಿ
Last Updated 11 ಮಾರ್ಚ್ 2023, 7:37 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಹೋಳಿ ಹಬ್ಬದ ಅಂಗವಾಗಿ ವಾಣಿಜ್ಯನಗರಿ ಹುಬ್ಬಳ್ಳಿಯಲ್ಲಿ ಶನಿವಾರ ರಂಗಪಂಚಮಿ ಆಚರಿಸಲಾಯಿತು.

ಚಿನ್ನರು–ಯುವಕರು–ಹಿರಿಯರು–ವೃದ್ಧರೆಂಬ ಭೇದವಿಲ್ಲದೇ ಜನರು ಪರಸ್ಪರ ಬಣ್ಣ ಹಚ್ಚಿ ಹಬ್ಬದ ಶುಭಾಶಯ ಕೋರಿದರು. ಬೆಳಿಗ್ಗೆಯಿಂದಲೇ ಚಿಣ್ಣರು ಬಣ್ಣ ತುಂಬಿದ ಪ‍್ಲಾಸ್ಟಿಕ್‌, ಬಣ್ಣದ ನೀರು ತುಂಬಿದ ಬಾಟಲುಗಳು–ಬಕೇಟ್‌ಗಳೊಂದಿಗೆ ಬೀದಿ ಆವರಿಸಿದರು. ಹಾದು ಹೋಗುವವರಿಗೆಲ್ಲ ಬಣ್ಣ ಎರಚಿ ಖುಷಿಪಟ್ಟರು. ಬಕೇಟ್‌ಗಳಲ್ಲಿದ್ದ ಬಣ್ಣದ ನೀರನ್ನು ಪಿಚಕಾರಿಗಳಲ್ಲಿ ತುಂಬಿ ದಾರಿಹೋಕರಿಗೆ ಸಿಡಿಸಿ ಕೇಕೆ ಹಾಕಿ ಸಂಭ್ರಮಿಸಿದರು.

ಬಾಲಕರು ತಂಡಗಳಾಗಿ ಓಣಿ–ಓಣಿಗಳಿಗೆ ಸುತ್ತಿ ಬಣ್ಣವಾಡಿದರು. ವಿವಿಧ ಮುಖವಾಡಗಳನ್ನು ಧರಿಸಿ, ತರಹೇವಾರಿ ಪೀಪಿ ಹಾಗೂ ಚಿಕ್ಕ ತುತ್ತೂರಿಗಳನ್ನು ಊದಿ ಸದ್ದು ಮೊಳಗಿಸಿದರು.

ಯುವಕ–ಯುವತಿಯರು ದ್ವಿಚಕ್ರ ವಾಹನಗಳಲ್ಲಿ ನಗರದಲ್ಲಿ ಸುತ್ತಾಡಿ ಬಣ್ಣ ಆಡಿ, ತುತ್ತೂರಿ ಊದಿ ರಂಗಪಂಚಮಿ ಆಚರಿಸಿದರು.

ಹುಬ್ಬಳ್ಳಿ ಕೇಶ್ವಾಪುರ, ಗೋಪನಕೊಪ್ಪ, ಬೆಂಗೇರಿ, ಶಾಂತಿ ನಗರ, ಮಧುರಾ ಕಾಲೊನಿ, ವಿದ್ಯಾನಗರ, ಲಿಂಗರಾಜ ನಗರದ, ಶ್ರೇಯಾ ನಗರ, ಸಿದ್ಧೇಶ್ವರ ಪಾರ್ಕ್‌, ಹೊಸೂರು ಕ್ರಾಸ್‌, ಗೋಕುಲ್‌ ರಸ್ತೆ, ಹಳೇ ಹುಬ್ಬಳ್ಳಿ ಸೇರಿದಂತೆ ವಿವಿಧೆಡೆ ಬೆಳಿಗ್ಗೆ 8ರಿಂದಲೇ ಹಬ್ಬದ ಸಡಗರ ಕಂಡು ಬಂತು. ಮಧ್ಯಾಹ್ನ ತನಕ ಬಣ್ಣದಾಟ ಮುಂದುವರಿದಿತ್ತು.

ಲಿಂಗರಾಜ ನಗರದ ಬನಶಂಕರಿ ಬಡಾವಣೆಯಲ್ಲಿರುವ ಬನಶಂಕರಿ ಸಮುದಾಯ ಭವನದ ಎದುರು ಸ್ಥಳೀಯರು ರೇನ್‌ಡಾನ್ಸ್‌ ಆಯೋಜಿಸಿದ್ದರು. ಯುವಕರು–ಯುವತಿಯರು ಹೋಳಿ ಹಬ್ಬದ ಕುರಿತ ಕನ್ನಡ–ಹಿಂದಿ ಭಾಷೆಗಳ ಗೀತೆಗಳಿಗೆ ಹೆಜ್ಜೆ ಹಾಕಿ ಹಬ್ಬ ಆಚರಿಸಿದರು.

ಜೈ ರಾಜ್‌ವಂಶ ಅಭಿಮಾನಿಗಳ ಬಳಗದ ಸದಸ್ಯರು ಕನ್ನಡ ಧ್ವಜದ ಬಣ್ಣಗಳನ್ನು ಬಳಿದುಕೊಂಡು, ದಿ.ಪುನೀತ್‌ರಾಜ್‌ಕುಮಾರ್ ಭಾವಚಿತ್ರ ಹಿಡಿದು ನಗರದಲ್ಲಿ ಸಂಚರಿಸಿ ಬಣ್ಣ ಆಡಿದ್ದು ವಿಶೇಷವಾಗಿತ್ತು.

ಅಹಿತಕರ ಘಟನೆ ತಡೆಯಲು ನಗರದ ಪ್ರಮುಖ ಹಾಗೂ ಸೂಕ್ಷ್ಮ ಸ್ಥಳಗಳಲ್ಲಿ ಪೊಲೀಸರನ್ನು ನಿಯೋಜಿಸಲಾಗಿದ್ದು, ಕಟ್ಟೆಚ್ಚರ ವಹಿಸಿದ್ದಾರೆ. ಅಲ್ಲಲ್ಲಿ ಪೊಲೀಸರಿಗೂ ಜನರು ಬಣ್ಣ ಹಚ್ಚಿ ಹಬ್ಬದ ಶುಭಾಶಯ ಕೋರಿದ ದೃಶ್ಯ ಕಂಡು ಬಂತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT