ಹುಬ್ಬಳ್ಳಿ: ‘ಧಾರವಾಡದ ನುಗ್ಗಿಕೇರಿಯಲ್ಲಿ ನಡೆದ ಪ್ರಕರಣ ಮತ್ತೆಲ್ಲಿಯೂ ನಡೆಯದಂತೆ ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು’ ಎಂದು ಹುಬ್ಬಳ್ಳಿ ಅಂಜುಮನ್ ಸಂಸ್ಥೆಯ ಅಧ್ಯಕ್ಷ ಯೂಸೂಫ್ ಸವಣೂರ ಹೇಳಿದರು.
ನವನಗರದ ಪೊಲೀಸ್ ಕಮಿಷನರ್ ಕಚೇರಿಯಲ್ಲಿ ಸೋಮವಾರ ಮನವಿ ನೀಡಿದ ಮುಖಂಡರು, ‘ಅವಳಿ ನಗರ ಹಾಗೂ ಧಾರವಾಡ ಜಿಲ್ಲೆಯಲ್ಲಿ ಎಲ್ಲ ಧರ್ಮದವರು ಪ್ರೀತಿ–ವಿಶ್ವಾಸದಿಂದ ಬಾಳುತ್ತಿದ್ದಾರೆ. ಹಿಂದೂ–ಮುಸ್ಲಿಮರು ಭಾವೈಕ್ಯದಡಿಯಲ್ಲಿ ಪರಸ್ಪರ ಧಾರ್ಮಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಶಾಂತಿ ಕಾಪಾಡಿಕೊಂಡು ಬಂದಿದ್ದಾರೆ. ಆದರೆ, ಕೆಲವರು ಉದ್ದೇಶಪೂರ್ವಕವಾಗಿ ಶಾಂತಿ ಕದಡಲು ಯತ್ನಿಸುತ್ತಿದ್ದಾರೆ. ನುಗ್ಗಿಕೇರಿಯಲ್ಲಿ ನಡೆದ ಪ್ರಕರಣ ಹಿಂದೆ ಯಾರಿದ್ದಾರೆ ಎಂದು ತನಿಖೆ ನಡೆಸಬೇಕು’ ಎಂದು ಒತ್ತಾಯಿಸಿದರು.
ಕಮಿಷನರ್ ಲಾಭೂರಾಮ್ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ. ಕೃಷ್ಣಕಾಂತ್ ಅವರಿಗೆ ‘ನುಗ್ಗಿಕೇರಿ ಹನುಮಾನ ದೇವಸ್ಥಾನದ ಆವರಣದಲ್ಲಿ ನಬೀಸಾಬ್ ಅವರಿಗೆ ಸೇರಿದ ಕಲ್ಲಂಗಡಿ ಹಣ್ಣುಗಳನ್ನು ಕೆಲವರು ನಾಶಪಡಿಸಿ ನಷ್ಟವುಂಟು ಮಾಡಿದ್ದಾರೆ. ಅದನ್ನು ಅವರಿಂದಲೇ ವಸೂಲು ಮಾಡಬೇಕು. ಕಠಿಣ ಶಿಕ್ಷೆಗೆ ಒಳಪಡಿಸಬೇಕು’ ಎಂದು ಆಗ್ರಹಿಸಿದರು.