ಧಾರವಾಡ: ‘ಕರ್ನಾಟಕ ಪ್ರೌಢಶಾಲೆ ಶತಮಾನೋತ್ಸವದ ಅಂಗವಾಗಿ ಹಳೇ ವಿದ್ಯಾರ್ಥಿಗಳ ಸಂಘದ ವತಿಯಿಂದ ವಿವಿಧ ಶೈಕ್ಷಣಿಕ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿದೆ’ ಎಂದು ಸಂಘದ ಅಧ್ಯಕ್ಷ ಸಂತೋಷ ಶೆಟ್ಟಿ ಹೇಳಿದರು.
‘ಜುಲೈ 20ರಂದು ಮಧ್ಯಾಹ್ನ 1.30ಕ್ಕೆ ಕರ್ನಾಟಕ ಪ್ರೌಢಶಾಲೆಯಲ್ಲಿ ಧಾರವಾಡ ಶಹರದ 9ನೇ ಹಾಗೂ 10ನೇ ತರಗತಿ ವಿದ್ಯಾರ್ಥಿಗಳಿಗಾಗಿ ಆವರ್ತ ಕೋಷ್ಠಕ(ಪರಿಯಾಡಿಕ್ ಟೇಬಲ್)ದ 150ನೇ ವರ್ಷಾಚರಣೆಯ ನಿಮಿತ್ತ ಪ್ರಬಂಧ ಸ್ಪರ್ಧೆ ಆಯೋಜಿಸಲಾಗಿದೆ. ಕನ್ನಡ ಮತ್ತು ಇಂಗ್ಲಿಷ್ ಎರಡರಲ್ಲೂ ಪ್ರಬಂಧ ಬರೆಯಬಹುದಾಗಿದ್ದು, ಎರಡಕ್ಕೂ ಪ್ರತ್ಯೇಕವಾಗಿ ಬಹುಮಾನ ನೀಡಲಾಗುವುದು’ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
‘ಪ್ರಬಂಧ ಸ್ಪರ್ಧೆಗೆ ಪ್ರತಿ ಶಾಲೆಯಿಂದ ಇಬ್ಬರು ವಿದ್ಯಾರ್ಥಿಗಳಿಗೆ ಅವಕಾಶ. ಪ್ರಬಂಧವು ಸಾವಿರ ಪದಗಳನ್ನು ಮೀರದಂತೆ ಇರಬೇಕು. ಭಾಗವಹಿಸುವ ವಿದ್ಯಾರ್ಥಿಗಳಿಗೆ ಹೆಸರು ನೋಂದಾಯಿಸಲು ಜುಲೈ 13 ಕೊನೆಯ ದಿನವಾಗಿದೆ. ಸ್ಪರ್ಧಿಸಲು ಇಚ್ಚಿಸುವ ಶಾಲಾ ವಿದ್ಯಾರ್ಥಿಗಳು 0836–2442309 ಸಂಪರ್ಕಿಸಬಹುದು’ ಎಂದರು.
‘ಜುಲೈ 25 ರಂದು ಶಾಲೆಯ ಆವರಣದಲ್ಲಿ ಧಾರವಾಡ ಜಿಲ್ಲೆಯ 400 ಪ್ರೌಢಶಾಲೆ ವಿದ್ಯಾರ್ಥಿಗಳಿಗಾಗಿ ವಿನ್ಸ್ಪೈರ್ ಹೆಸರಿನ ಅಡಿಯಲ್ಲಿ ವಿಜ್ಞಾನ ವಸ್ತು ಪ್ರದರ್ಶನ ಆಯೋಜಿಸಲಾಗಿದೆ. ಶಕ್ತಿಯ ಪರ್ಯಾಯ ಆಕರಗಳು, ಸಾರಿಗೆ ಮತ್ತು ಸಂಪರ್ಕ ತಂತ್ರಜ್ಞಾನ, ಹಸಿರು ಶಕ್ತಿ: ಕೃಷಿಯಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನದ ಬಳಕೆ, ಜಾಗತಿಕ ತಾಪಮಾನದ ಏರಿಕೆಗೆ ಪರಿಹಾರ ವಿಷಯಗಳ ಬಗ್ಗೆ ಪ್ರದರ್ಶನದಲ್ಲಿ ರೂಪಕಗಳನ್ನು ತಯಾರಿಸಬಹುದು. ಸ್ಪರ್ಧೆಯಲ್ಲಿ ಭಾಗಿಯಾದ ವಿಜೇತರಿಗೆ ನಗದು ಸೇರಿದಂತೆ ಪ್ರಮಾಣ ಪತ್ರ ವಿತರಿಸಲಾಗುವುದು’ ಎಂದು ಹೇಳಿದರು.
‘ಅಲ್ಲದೇ ಜುಲೈ 29 ರಂದು ನಡೆಯುವ ಪ್ರಬಂಧ ಸ್ಪರ್ಧೆ ಹಾಗೂ ವಿಜ್ಞಾನ ವಸ್ತು ಪ್ರದರ್ಶನದಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ಕಾರ್ಯಕ್ರಮ ನಡೆಯಲಿದ್ದು, ಹಿರಿಯ ವಿಜ್ಞಾನಿ ಪ್ರೊ. ಸಿ.ಎನ್.ಆರ್. ರಾವ್ ಬಹುಮಾನಗಳನ್ನು ವಿತರಣೆ ಮಾಡಲಿದ್ದಾರೆ. ಇದೇ ಸಂದರ್ಭದಲ್ಲಿ ವಿವಿಧ ಸ್ಪರ್ಧೆಯಲ್ಲಿ ಮೊದಲ ಸ್ಥಾನ ಪಡೆದ ವಿದ್ಯಾರ್ಥಿಗಳಿಗೆ ವಿಜ್ಞಾನ ಮಾದರಿ ಮತ್ತು ಪ್ರಬಂಧ ಓದುವ ಅವಕಾಶ ಸಿಗಲಿದೆ’ ಎಂದರು.
ಡಾ. ಪ್ರಕಾಶ ರಾಮನಗೌಡರ, ಡಾ. ವಿಶ್ವನಾಥ ಚಿಂತಾಮಣಿ, ಸುನೀಲ್ ಹೊಂಗಲ, ಶಿವಯೋಗಿ ಅಮಿನಗಡ, ಹರ್ಷಕುಮಾರ ತುರಮರಿ, ರವಿ ಮುನವಳ್ಳಿ, ಪ್ರಕಾಶ ಮುತ್ತಗಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.