ಹುಬ್ಬಳ್ಳಿ: ‘ಕಿತ್ತೂರು ಉತ್ಸವಕ್ಕೆ ಹೋಗಿದ್ದರಿಂದ ನಾನು ಅಧಿಕಾರ ಕಳೆದುಕೊಂಡಿಲ್ಲ. ಮುಖ್ಯಮಂತ್ರಿ ಆಗಿ ನನ್ನ ಅವಧಿ ನಿಗದಿಯಾಗಿದ್ದು 10 ತಿಂಗಳು ಮಾತ್ರ. ಅದನ್ನು ಪೂರ್ಣಗೊಳಿಸಿದ್ದೇನೆ’ ಎಂದು ಶಾಸಕ ಜಗದೀಶ ಶೆಟ್ಟರ್ ಹೇಳಿದರು.
ನಗರದಲ್ಲಿ ಭಾನುವಾರ ಏರ್ಪಡಿಸಿದ್ದ ಕಿತ್ತೂರು ಚನ್ನಮ್ಮ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಕಿತ್ತೂರು ಉತ್ಸವ ಉದ್ಘಾಟನೆ ಮಾಡಿದ ನಂತರ ಜಗದೀಶ ಶೆಟ್ಟರ್ ಅವರು ಅಧಿಕಾರ ಕಳೆದುಕೊಂಡರು ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ. ಕಿತ್ತೂರು ಉತ್ಸವ, ಚಾಮರಾಜನಗರಕ್ಕೆ ಹೋದರೂ ನನಗೆ ಏನೂ ಆಗಲಿಲ್ಲ’ ಎಂದರು.
‘ಕಂದಾಯ ಸಚಿವ, ವಿಧಾನಸಭಾಧ್ಯಕ್ಷನಾಗಿದ್ದಾಗ ಪ್ರತಿ ವರ್ಷ ಕಿತ್ತೂರು ಉತ್ಸವಕ್ಕೆ ಹೋಗಿದ್ದೇನೆ. ಮುಖ್ಯಮಂತ್ರಿ ಆದ ನಂತರ ಮೂರೇ ತಿಂಗಳಲ್ಲಿ ಚಾಮರಾಜನಗರಕ್ಕೂ ಭೇಟಿ ನೀಡಿದ್ದೆ’ ಎಂದು ಹೇಳಿದರು.
‘ಈಗಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕಿತ್ತೂರು ಉತ್ಸವಕ್ಕೆ ಹೋಗುತ್ತಿದ್ದಾರೆ. ಮಹಾತ್ಮ ಬಸವೇಶ್ವರರು 12ನೇ ಶತಮಾನದಲ್ಲಿಯೇ ಮೌಢ್ಯದ ಬಿರುದ್ಧ ಹೋರಾಟ ನಡೆಸಿದ್ದಾರೆ. ಜನರು ಮೂಢನಂಬಿಕೆಗಳನ್ನು ಬಿಡಬೇಕು’ ಎಂದರು.
’ರಾಜ್ಯದಲ್ಲಿ ಜೆಡಿಎಸ್ ಪಕ್ಷಕ್ಕೆ ಅಸ್ತಿತ್ವವೇ ಇಲ್ಲ. ಚುನಾವಣೆಗೆ ಇನ್ನೂ ಆರು ತಿಂಗಳು ಇರುವ ಮೊದಲೇ 120 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಿಸಿದ್ದಾರೆ. ಅವರನ್ನು ಸ್ವೀಕರಿಸುವುದು, ಬಿಡುವುದು ಜನರಿಗೆ ಬಿಟ್ಟಿದ್ದು’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು