ಹುಬ್ಬಳ್ಳಿ: ನಗರದ ಕೆಎಲ್ಇ ತಾಂತ್ರಿಕ ವಿಶ್ವವಿದ್ಯಾಲಯದಲ್ಲಿ ಪ್ರಾದೇಶಿಕ ಎಂಜಿನಿಯರಿಂಗ್ ಶಿಕ್ಷಣ ಕುರಿತ ವಿಚಾರ ಸಂಕಿರಣ ಗುರುವಾರ ನಡೆಯಿತು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ದಕ್ಷಿಣ ಆಫ್ರಿಕಾದ ಜೋಹಾನ್ಸ್ಬರ್ಗ್ ವಿಶ್ವವಿದ್ಯಾಲಯದ ಎಂಜಿನಿಯರಿಂಗ್ ಎಜ್ಯುಕೇಷನ್ ನೆಟ್ವರ್ಕ್ ಸಂಶೋಧನಾ ಕೇಂದ್ರದ ಮುಖ್ಯಸ್ಥೆ ಥೆರೆಸಾ ಹ್ಯಾಟ್ಟಿಂಗ್ , ‘ಸಂಪನ್ಮೂಲ, ಕಾರ್ಯಾಗಾರ ಹಾಗೂ ನಿಯತಕಾಲಿಕೆಗಳ ಮೂಲಕ ಸ್ವತಂತ್ರವಾದ ಹಾಗೂ ಸಮುದಾಯಕ್ಕೆ ನೆರವಾಗುವ ಸ್ಥಳೀಯ ಜಾಲಗಳ ರಚನೆ ಈ ವಿಚಾರ ಸಂಕಿರಣದ ಉದ್ದೇಶವಾಗಿದೆ’ ಎಂದು ಹೇಳಿದರು.
ಐಯುಸಿಇಇಯ ಕಾರ್ಯನಿರ್ವಾಹಕ ನಿರ್ದೇಶಕ ಕೃಷ್ಣ ವೇದುಲ ಮಾತನಾಡಿ, ಎಂಜಿನಿಯರಿಂಗ್ ಶಿಕ್ಷಣದಲ್ಲಿ ಸಮಗ್ರ ಸಂಶೋಧನೆಯ ಮಹತ್ವದ ಬಗ್ಗೆ ತಿಳಿಸಿದರು.
ಕೆಎಲ್ಇ ತಾಂತ್ರಿಕ ವಿ.ವಿ. ಕುಲಪತಿ ಅಶೋಕ ಶೆಟ್ಟರ್, ಜಾಗತಿಕ ಗುಣಮಟ್ಟದ ಶಿಕ್ಷಣದ ಅಗತ್ಯತೆ ಬಗ್ಗೆ ಮಾತನಾಡಿದರು. ಈ ಸಂದರ್ಭದಲ್ಲಿ 800 ಡಾಲರ್ ಮೌಲ್ಯದ ಡಂಕನ್ ಫಿರ್ಸರ್ ಪ್ರಶಸ್ತಿಯನ್ನು ಲಿನ್ಸಾ ರೂನೆ ಅವರಿಗೆ ಪ್ರದಾನ ಮಾಡಲಾಯಿತು.
ಸೊಲ್ಲಾಪುರದ ಎಂಐಟಿ ವಿಶ್ವ ಪ್ರಯಾಗ್ ವಿವಿಯ ಕುಲಪತಿ ಗೋಪಾಲ ಕೃಷ್ಣ ಜೋಶಿ, ಕೆ.ಜಿ. ರೆಡ್ಡಿ ಎಂಜಿನಿಯರಿಂಗ್ ಕಾಲೇಜಿನ ನಿರ್ದೇಶಕ ರೋಹಿತ್ ಕಂದಕಟ್ಲ, ಪ್ರಕಾಶ ತಿವಾರಿ, ಸೋಹಂ ಸೊಹೊನಿ, ಬಿ.ಎಸ್. ಅನಾಮಿ, ವಿಜಯಲಕ್ಷ್ಮಿ, ಪ್ರೀತಿ ಬಾಳಿಗರ ಉಪಸ್ಥಿತರಿದ್ದರು.