ಹುಬ್ಬಳ್ಳಿ: ವಿಶ್ವ ಮಾಲಿನ್ಯ ನಿಯಂತ್ರಣ ದಿನದ ಅಂಗವಾಗಿ ವಸುಂಧರಾ ಫೌಂಡೇಷನ್, ಸ್ವರ್ಣ ಗ್ರೂಪ್, ಮಹಾನಗರ ಪಾಲಿಕೆ ಹಾಗೂ ಅರಣ್ಯ ಇಲಾಖೆ ಸಹಯೋಗದಲ್ಲಿ ಕೈಗೊಂಡಿರುವ ಮೊಳೆ ಮುಕ್ತ ಮರ ಅಭಿಯಾನಕ್ಕೆ, ನಗರದ ಮಯೂರಿ ಎಸ್ಟೇಟ್ನಲ್ಲಿ ಪಾಲಿಕೆ ಆಯುಕ್ತ ಡಾ. ಗೋಪಾಲಕೃಷ್ಣ ಬಿ. ಶುಕ್ರವಾರ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಅವರು, ‘ಜಾಹೀರಾತು ಫಲಕಗಳನ್ನು ನೇತು ಹಾಕುವುದು ಸೇರಿದಂತೆ, ವಿವಿಧ ಕಾರಣಗಳಿಗೆ ಜನರು ಮರಗಳಿಗೆ ಮೊಳೆ ಹೊಡೆಯುವುದನ್ನು ಬಿಡಬೇಕು. ನಗರಗಳಲ್ಲಿರುವ ಅಮೂಲ್ಯ ಮರಗಳ ರಕ್ಷಣೆಗೆ ಮುಂದಾಗಬೇಕು’ ಎಂದರು.
ಸ್ವರ್ಣ ಗ್ರೂಪ್ನ ವಿ.ಎಸ್.ವಿ. ಪ್ರಸಾದ್, ‘ಮರಗಳಿಗೂ ಜೀವವಿದೆ. ನಗರದಲ್ಲಿರುವ ಮರ–ಗಿಡಗಳನ್ನು ಸಂರಕ್ಷಿಸುವುದು ನಮ್ಮೆಲ್ಲರ ಜವಾಬ್ದಾರಿ. ಮರಗಳಿದ್ದಾಗ ಶುದ್ಧ ಗಾಳಿ ಸಿಗುತ್ತದೆ. ಪರಿಸರವು ಸಮತೋಲನದಲ್ಲಿರುತ್ತದೆ’ ಎಂದರು.
ಫೌಂಡೇಷನ್ ಅಧ್ಯಕ್ಷ ಮೇಘರಾಜ ಕೆರೂರ, ‘ಮರಗಳ ಸಂರಕ್ಷಣೆ ಕಾಯ್ದೆ ಪ್ರಕಾರ, ಮರಗಳ ಮೇಲೆ ಜಾಹೀರಾತು ಫಲಕ ಅಂಟಿಸುವುದು ಕಾನೂನುಬಾಹಿರ. ಮೊಳೆ ಹೊಡೆಯುವುದರಿಂದ ಅವುಗಳ ಆಯಸ್ಸು ತಗ್ಗುತ್ತದೆ. ಮರಗಳ ಮೇಲೆ ಜಾಹೀರಾತು ಫಲಕ ಅಂಟಿಸುವವ ವಿರುದ್ಧ ಪಾಲಿಕೆ ಕ್ರಮ ಕೈಗೊಳ್ಳಬೇಕು’ ಎಂದು ಒತ್ತಾಯಿಸಿದರು.
ವಲಯ ಅರಣ್ಯಾಧಿಕಾರಿ ಶ್ರೀಧರ ತೆಗ್ಗಿನಮನಿ, ಗ್ರೀನ್ ಕರ್ನಾಟಕ ಅಸೋಸಿಯೇಷನ್ ಅಧ್ಯಕ್ಷ ಚನ್ನು ಹೊಸಮನಿ, ಮಾಲಿನ್ಯ ನಿಯಂತ್ರಣ ಮಂಡಳಿಯ ವಿಜಯಲಕ್ಷ್ಮಿ ಬಾಳಿಕಾಯಿ, ವಿನಾಯಕ ನಾಯ್ಕರ ಇದ್ದರು.