ಕಲಘಟಗಿ: ರೈತರೊಬ್ಬರ ಖಾತೆ ಬದಲಾವಣೆ ಮಾಡಿಕೊಡಲು ₹45 ಸಾವಿರ ಲಂಚ ಪಡೆಯುವಾಗ ತಹಶೀಲ್ದಾರ್ ಕಚೇರಿ ಶಿರಸ್ತೇದಾರ್ ಸುರೇಶ ಅಡವಿ ಲೋಕಾಯುಕ್ತ ಬಲೆಗೆ ಬಿದ್ದ ಘಟನೆ ಗುರುವಾರ ಜರುಗಿದೆ.
ತಾಲ್ಲೂಕಿನ ಕೂಡಲಗಿ ಗ್ರಾಮದ ರೈತರಾದ ಮಲ್ಲಿಕಾರ್ಜುನ ಮಹದೇವಪ್ಪ ಕುರುಬರ ಎಂಬ ರೈತರ ಹೊಲದ ಸರ್ವೇ ನಂಬರ್ 86 ಮತ್ತು 160 ರ ಭೂ ನ್ಯಾಯ ಮಂಡಳಿಯ ಆದೇಶದ ಖಾತೆ ಬದಲಾವಣೆ ಮಾಡಿಕೊಡಲು ಹಣದ ಬೇಡಿಕೆ ಇಟ್ಟಿದ್ದರು. ಈ ಕುರಿತು ರೈತನ ದೂರಿನ ಮೇರೆಗೆ ಧಾರವಾಡ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಜಿಲ್ಲಾ ಲೋಕಾಯುಕ್ತ ಎಸ್ಪಿ ಶಂಕರ್ ಎಂ. ರಾಗಿ ಮಾರ್ಗದರ್ಶನದಲ್ಲಿ ಸಿಪಿಐ ಬಸಗೌಡ ಪಾಟೀಲ್, ಪ್ರಭುಲಿಂಗಯ್ಯ ಹಿರೇಮಠ, ಟಿ.ಎ ಸೊಪ್ಪಿ, ವಿ.ಎಸ್ ದೇಸಾಯಿಗೌಡ್ರ, ಎಸ್.ಇ ಲಕ್ಕಮ್ಮನವರ, ಎಂ.ಎಂ ಶಿವನಾಯ್ಕರ ಕಾರ್ಯಚರಣೆಯಲ್ಲಿ ಇದ್ದರು.