ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯದ ಎಲ್ಲೆಡೆ ಮಾದಿಗ ಮುನ್ನಡೆ ಸಮಾವೇಶ: ಸಿಎಂ ಹೆಸರೆತ್ತಿದ್ದಕ್ಕೆ ಆಕ್ಷೇಪ

Published 30 ಡಿಸೆಂಬರ್ 2023, 13:57 IST
Last Updated 30 ಡಿಸೆಂಬರ್ 2023, 13:57 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಮಾದಿಗ ಸಮುದಾಯದವರು ಇಲ್ಲಿನ ಸವಾಯಿ ಗಂಧರ್ವ ಕಲಾ ಮಂದಿರದಲ್ಲಿ ಶನಿವಾರ ಆಯೋಜಿಸಿದ್ದ ‘ರಾಜ್ಯದ ಎಲ್ಲೆಡೆ ಮಾದಿಗ ಮುನ್ನಡೆ’ ಸಮಾವೇಶದಲ್ಲಿ ಕಾರ್ಯಕ್ರಮ ನಿರೂಪಕರೊಬ್ಬರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ನೀಡಿದ ಹೇಳಿಕೆ ಹಾಗೂ ಅವರ ಕುರಿತಾದ ವಿಡಿಯೊ ದೃಶ್ಯಾವಳಿ ಪ್ರಸಾರ ಮಾಡಿದ್ದಕ್ಕೆ ಅದೇ ಸಮಾಜದ ಕೆಲ ಮುಖಂಡರು ವೇದಿಕೆಯಲ್ಲೇ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.

ಮಾದಿಗ ಮೀಸಲಾತಿಯ ಹಿನ್ನೆಲೆ ಕುರಿತು ಒಳಮೀಸಲಾತಿ ಹೋರಾಟಗಾರ ಈರಣ್ಣ ಮೌರ್ಯ ಮಾತನಾಡಿ, ‘ಒಳಮೀಸಲಾತಿ ನೀಡಲು ಕಾಂಗ್ರೆಸ್‌ ಸರ್ಕಾರಕ್ಕೆ ಒಲವು ಇಲ್ಲ. 2013–18ರ ಅವಧಿಯಲ್ಲಿ ಮುಖ್ಯಮಂತ್ರಿ ಆಗಿದ್ದ ಸಿದ್ದರಾಮಯ್ಯ ಅವರು ಒಳಮೀಸಲಾತಿ ಬಗ್ಗೆ ಏನೂ ಕ್ರಮಕೈಗೊಳ್ಳಲಿಲ್ಲ’ ಎಂದು ಟೀಕಿಸಿದರು. ಇದಕ್ಕೆ ಪೂರಕವಾಗಿ ಸಿದ್ದರಾಮಯ್ಯ ಅವರ ದೃಶ್ಯಾವಳಿ ಪ್ರದರ್ಶಿಸಿದರು. ಇದಕ್ಕೂ ಮುಂಚೆ ತಮ್ಮ ಭಾಷಣದುದ್ದಕ್ಕೂ ಕಾಂಗ್ರೆಸ್‌ ಮತ್ತು ಸಿದ್ದರಾಮಯ್ಯ ಅವರನ್ನು ಗುರಿಯಾಗಿಸಿಕೊಂಡು ಟೀಕಿಸಿದ್ದರು.

ವೇದಿಕೆ ಮೇಲಿದ್ದ ಮಾದಿಗ ಸಮುದಾಯದ ಹೋರಾಟಗಾರರಾದ ವೆಂಕಟೇಶ ಸಕಬಾಲ್‌ ಹಾಗೂ ಅಶೋಕ ದೊಡಮನಿ ಅವರು ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ‘ಟೀಕಿಸುವುದು ಮುಖ್ಯವಲ್ಲ. ಒಳಮೀಸಲಾತಿ ಪಡೆಯಲು ಮುಂದೆ ಏನು ಮಾಡಬೇಕು ಎಂಬುದನ್ನು ಹೇಳಿ’ ಎಂದು ಅಸಮಾಧಾನ ವ್ಯಕ್ತಪಡಿಸಿದರು. ನಂತರ ವೇದಿಕೆಯಿಂದ ಕೆಳಗಿಳಿದು, ಬಾಗಿಲಿನತ್ತ ಹೊರಟರು.

ವೇದಿಕೆ ಮೇಲಿದ್ದ ಶಾಸಕ ಅರವಿಂದ ಬೆಲ್ಲದ ಅವರು ತಕ್ಷಣ ಬಾಗಿಲು ಬಳಿ ತೆರಳಿ, ಅವರನ್ನು ತಡೆದು ವಾಪಸ್‌ ಕರೆತಂದರು.

ತಾಳ್ಮೆ ವಹಿಸುವಂತೆ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಮನವಿ ಮಾಡಿದರು. ಮಾಜಿ ಶಾಸಕ ಗೋವಿಂದ ಕಾರಜೋಳ ಹಾಗೂ ವೀರಭದ್ರಪ್ಪ ಹಾಲಹರವಿ ಅವರು ಪರಿಸ್ಥಿತಿ ತಿಳಿಗೊಳಿಸಿದರು. ಮೌರ್ಯ ಅವರ ಭಾಷಣವನ್ನು ಅರ್ಧಕ್ಕೆ ಮೊಟಕುಗೊಳಿಸಲಾಯಿತು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT