ಹುಬ್ಬಳ್ಳಿ: ದೇಶದ ಶರಣರು ಹಾಗೂ ಸೂಫಿಸಂತರ ಜೀವನ ಪರಿಚಯಿಸುವ ಉದ್ದೇಶದಿಂದ ಅಥಣಿಯ ಮೋಟಗಿಮಠದ ಪ್ರಭು ಚನ್ನಬಸವ (ಅಥಣೀಶ) ಸ್ವಾಮೀಜಿ ಬರೆದಿರುವ ‘ಮಹಾತ್ಮರ ಚರಿತಾಮೃತ’ ಪುಸ್ತಕ ಬಿಡುಗಡೆ ಸಮಾರಂಭ ಸೆ. 25ರಂದು ಬೆಳಿಗ್ಗೆ 10.30ಕ್ಕೆ ಬೆಂಗಳೂರಿನ ವಿಜಯನಗರದಲ್ಲಿರುವ ಬಸವೇಶ್ವರ ಸುಜ್ಞಾನ ಮಂಟಪದಲ್ಲಿ ನಡೆಯಲಿದೆ.
ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಪ್ರಭು ಚನ್ನಬಸವ ಸ್ವಾಮೀಜಿ ‘ಕೋವಿಡ್ ಆರಂಭವಾದ ದಿನಗಳಲ್ಲಿ ಎಲ್ಲೂ ಹೊರಹೋಗುವಂತಿರಲಿಲ್ಲ. ಈ ಸಮಯವನ್ನು ಬಳಸಿಕೊಂಡು 1,100 ಪುಟಗಳ ಪುಸ್ತಕ ಬರೆದಿದ್ದೇನೆ. 216 ಧಾರ್ಮಿಕ ಹಾಗೂ ಸಾಮಾಜಿಕ ಚಿಂತಕರ ಜೀವನ ಪರಿಚಯ ಮಾಡಿಕೊಟ್ಟಿದ್ದೇನೆ. ಕರ್ನಾಟಕ, ತಮಿಳುನಾಡು, ಕೇರಳ, ಉತ್ತರ ಪ್ರದೇಶ, ಬಿಹಾರ ಮತ್ತು ಆಂಧ್ರದ ಧಾರ್ಮಿಕ ಮುಖಂಡರು, ಸೂಫಿಸಂತರ ಪರಿಚಯ ಒದಗಿಸಿದ್ದೇನೆ’ ಎಂದರು.
‘ದೊಡ್ಡ ಪುಸ್ತಕವಾದ ಕಾರಣ ಮುಂದಿನ ದಿನಗಳಲ್ಲಿ ಡಿಜಟಲೀಕರಣ ಮಾಡಲಾಗುವುದು. ಆಡಿಯೊ ರೂಪದಲ್ಲಿ ಜನರನ್ನು ತಲುಪಲಾಗುವುದು. ಇಂಗ್ಲಿಷ್ನಲ್ಲಿಯೂ ತರ್ಜುಮೆ ಮಾಡಲಾಗುವುದು’ ಎಂದು ತಿಳಿಸಿದರು.
ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಸಹಯೋಗದಲ್ಲಿ ಕಾರ್ಯಕ್ರಮ ನಡೆಯಲಿದ್ದು, ನಿವೃತ್ತ ನ್ಯಾಯಮೂರ್ತಿ ಶಿವರಾಜ ಪಾಟೀಲ ಉದ್ಘಾಟಿಸಲಿದ್ದಾರೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪುಸ್ತಕ ಲೋಕಾರ್ಪಣೆ ಮಾಡುವರು. ಸಚಿವ ವಿ. ಸೋಮಣ್ಣ ಅಧ್ಯಕ್ಷತೆ ವಹಿಸುವರು. ಕರ್ನಾಟಕ ವೀರಶೈವ ಲಿಂಗಾಯತ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಬಿ.ಎಸ್. ಪರಮಶಿವಯ್ಯ, ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ ಮತ್ತು ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸಿ. ಸೋಮಶೇಖರ ಪಾಲ್ಗೊಳ್ಳಲಿದ್ದಾರೆ.
ರುದ್ರಾಕ್ಷಿ ಮಠದ ಬಸವಲಿಂಗ ಸ್ವಾಮೀಜಿ, ಜಾಗತಿಕ ಲಿಂಗಾಯತ ಮಹಾಸಭಾದ ಜಿಲ್ಲಾ ಘಟಕದ ಅಧ್ಯಕ್ಷ ಎಂ.ವಿ. ಗೊಂಗಡಶೆಟ್ಟಿ, ವೀರಶೈವ ಲಿಂಗಾಯತ ಒಳಪಂಗಡಗಳ ಒಕ್ಕೂಟದ ರಾಜ್ಯ ಘಟಕದ ಅಧ್ಯಕ್ಷ ಶರಣಪ್ಪ ಎಂ. ಕೊಟಗಿ, ಸಮಾಜದ ಪ್ರಮುಖರಾದ ಬಸವರಾಜ, ಶಂಕ್ರಣ್ಣ ಕೋಳಿವಾಡ ಹಾಗೂ ರಾಜಶೇಖರ ಮೆಣಸಿನಕಾಯಿ ಇದ್ದರು.
ಯಾವುದೇ ಧರ್ಮ ಹಾಗೂ ಜಾತಿಗೆ ಸೀಮಿತವಾಗಿ ಪುಸ್ತಕ ಬರೆದಿಲ್ಲ. ಬುದ್ಧ, ಬಸವ, ಅಂಬೇಡ್ಕರ್, ಪೈಗಂಬರ್, ಯೇಸು ಕ್ರಿಸ್ತ ಹೀಗೆ ಎಲ್ಲರನ್ನೊಳಗೊಂಡ ಮಾಹಿತಿಯಿದೆ.
- ಪ್ರಭು ಚನ್ನಬಸವ ಸ್ವಾಮೀಜಿ, ಮೋಟಗಿಮಠ, ಅಥಣಿ
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.