ಅಣ್ಣಿಗೇರಿ: ಸಮಾಜಕ್ಕೆ ತತ್ವಜ್ಞಾನಿ ಮಹಾಯೋಗಿ ವೇಮನರು ತಮ್ಮದೇ ಆದ ಸೇವೆಯನ್ನು ಸಮರ್ಪಣೆ ಮಾಡಿ ಹೆಸರುವಾಸಿಯಾದವರು ಎಂದು ಮಾಜಿ ಶಾಸಕ ಎನ್.ಎಚ್.ಕೋನರಡ್ಡಿ ಹೇಳಿದರು.
ಅವರು ಸ್ಥಳೀಯ ಎಸ್.ಎಂ.ಪಾಟೀಲ ಸಭಾಭವನದಲ್ಲಿ ಹಮ್ಮಿಕೊಂಡ ತತ್ವಜ್ಞಾನಿ ಮಹಾಯೋಗಿ ವೇಮನರ 611ನೇ ಜಯಂತ್ಯುತ್ಸವದಲ್ಲಿ ಮಾತನಾಡಿದರು.
ಯುವಸಮೂಹ ಮಹಾಯೋಗಿ ವೇಮನರ ಆದರ್ಶ ತತ್ವ ಸಿದ್ಧಾಂತಗಳನ್ನು ಪಾಲಿಸಿ ತಮ್ಮ ಜೀವನ ರೂಪಿಸಿಕೊಳ್ಳಬೇಕು. ವೇಮನರು ಮಾನವೀಯ ಮೌಲ್ಯಗಳ ಕುರಿತು ಸಾಕಷ್ಟು ಪರಿಕಲ್ಪನೆಗಳನ್ನು ಕಂಡವರಾಗಿದ್ದರು. ಅವರು ಹಾಕಿಕೊಟ್ಟ ಹಾದಿಯಲ್ಲಿ ನಡೆಯೋಣ ಎಂದರು.
ಸಾನ್ನಿಧ್ಯ ವಹಿಸಿದ್ದ ಸ್ಥಳೀಯ ದಾಸೋಹ ಮಠದ ಶಿವಕುಮಾರ ಸ್ವಾಮೀಜಿ, ದೇಶಕ್ಕೆ ತತ್ವಜ್ಞಾನಿ ವೇಮನರ ಕೊಡುಗೆ ಅನನ್ಯವಾಗಿದೆ. ವೇಮನರ ಪರಿಕಲ್ಪನೆಗಳು ಇಂದಿಗೂ ಜೀವಂತವಾಗಿವೆ. ವೇಮನರು ರಡ್ಡಿ ಸಮಾಜದವರಿಗೆ ಜ್ಞಾನದ ಪ್ರಣಾಳಿಕೆಯನ್ನು ನೀಡಿ ಮಹಾತತ್ವಜ್ಞಾನಿ ಎನಿಸಿದ್ದರು ಎಂದು ಹೇಳಿದರು.
ಹನಮಂತಪ್ಪ ಕಡೇಮನಿ ಅಧ್ಯಕ್ಷತೆ ವಹಿಸಿದ್ದರು. ಡಾ.ಎ.ಸಿ.ವಾಲಿ, ಡಾ.ಸುನಂದಾ ಬಳ್ಳೊಳ್ಳಿ, ಡಾ.ಕವಿತಾ ಮೇಟಿ ಮಹಾಯೋಗಿ ವೇಮನರ ಜೀವನ ಚರಿತ್ರೆ ಕುರಿತು ಉಪನ್ಯಾಸ ನೀಡಿದರು.
ಯೂತ್ ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ವಿನೋದ ಅಸೂಟಿ, ಸಮಾಜದ ಮುಖಂಡ ವ್ಹಿ.ಡಿ.ಅಂದಾನಿಗೌಡ್ರ, ಶಿವಣ್ಣ ಮಾಡಳ್ಳಿ, ಸಂಜೀವರಡ್ಡಿ ಅಮಡ್ಲ, ಪಾಂಡು ಬಿರಸಲ, ಶ್ರೀನಿವಾಸ ಮಂಕಣಿ, ರಾಜು ಜಂಗಲ ಇದ್ದರು.