ಹುಬ್ಬಳ್ಳಿ: ನಗರದ ಕೆಲವೆಡೆ ಸೋಮವಾರ ಸಂಭ್ರಮ– ಸಡಗರದಿಂದ ನಾಗರ ಪಂಚಮಿ ಆಚರಿಸಲಾಯಿತು. ಬಹುತೇಕರು ಮನೆಯಲ್ಲಿಯೇ ನಾಗರ ಮೂರ್ತಿಗೆ ವಿಶೇಷ ಪೂಜೆ ಮಾಡಿ ಹಾಲೆರೆದರೆ, ಕೆಲವರು ದೇವಸ್ಥಾನ ಆವರಣದಲ್ಲಿರುವ ಹುತ್ತ, ನಾಗರ ಮೂರ್ತಿಗೆ ಹಾಲೆರೆದರು.
ಮನೆ ಬಾಗಿಲಿಗೆ ಮಾವಿನ ತೋರಣ ಕಟ್ಟಿ, ಮನೆ ಮುಂದೆ ರಂಗೋಲಿ ಹಾಕುವ ಮೂಲಕ ಮಹಿಳೆಯರು ಬೆಳಿಗ್ಗೆಯೇ ಶ್ರಾವಣ ಮಾಸದ ಮೊದಲ ಹಬ್ಬವಾದ ನಾಗರ ಪಂಚಮಿಯನ್ನು ಸಂಭ್ರಮದಿಂದ ಸ್ವಾಗತಿಸಿದರು. ಶೇಂಗಾ, ಪುಟಾಣಿ, ಕೊಬ್ಬರಿ ಉಂಡಿ ಸೇರಿದಂತೆ ಇತರ ಸಿಹಿ ಪದಾರ್ಥಗಳನ್ನು ದೇವರಿಗೆ ಅರ್ಪಿಸಿದರು.
ಭವಾನಿ ನಗರದ ಬಳಿ ಇರುವ ಅಶ್ವತ್ಥ ಮರದ ಕೆಳಗಿರುವ ನಾಗರ ಮೂರ್ತಿಗೆ ಮಹಿಳೆಯರು ಹಾಲೆರೆದರು. ಸ್ಟೇಷನ್ ರಸ್ತೆಯ ಈಶ್ವರ ದೇವಸ್ಥಾನದಲ್ಲಿರುವ ನಾಗರ ಮೂರ್ತಿಗೆ ಭಕ್ತರು ವಿಶೇಷ ಪೂಜೆ ಸಲ್ಲಿಸಿದರು. ಅಶೋಕನಗರದ ಮಾರುತಿ ದೇವಸ್ಥಾನ ಹಾಗೂ ಲಿಂಗರಾಜನಗರದ ಮಂಗಳಾದೇವಿ ದೇವಸ್ಥಾನದಲ್ಲಿರುವ ನಾಗರ ಮೂರ್ತಿಗೂ ಪೂಜೆ ನಡೆಯಿತು.