ನವಲಗುಂದ: ನವಲಗುಂದ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿ ಎನ್.ಎಚ್.ಕೋನರಡ್ಡಿ ಗೆಲುವು ಸಾಧಿಸಿದ ಬೆನ್ನಲ್ಲೆ ಅವರ ಅಭಿಮಾನಿಗಳು ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಪಟ್ಟಣದಲ್ಲಿ ಪಟಾಕಿ ಸಿಡಿಸಿ ಬಣ್ಣ ಎರಚಿ ಸಂಭ್ರಮಿಸಿದರು.
ಗೆಲುವಿನ ಬಳಿಕ ಪಟ್ಟಣದಲ್ಲಿ ಮಾತನಾಡಿದ ಎನ್.ಎಚ್.ಕೋನರಡ್ಡಿ, ‘ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಅವರು ಐರನ್ ಲೆಗ್ ಅಲ್ಲ, ಅವರು ಗೋಲ್ಡನ್ ಲೆಗ್. ರಾಜ್ಯದಾದ್ಯಂತ ಭಾರತ್ ಜೋಡೊ ಯಾತ್ರೆ ವೇಳೆ ನಡೆಸಿದ ಪಾದಯಾತ್ರೆ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷದ ಅಭೂತ ಪೂರ್ವ ಗೆಲುವಿಗೆ ನೆರವಾಗಿದೆ’ ಎಂದರು.
‘ನನ್ನ ಅವಧಿಯಲ್ಲಿನ ಕೆಲಸಗಳ ಅಭಿವೃದ್ಧಿ ನೋಡಿ ಕ್ಷೇತ್ರದ ಜನ ಮತ ಹಾಕಿದ್ದಾರೆ. ನಾನೊಬ್ಬ ಕೆಲಸಗಾರ, ಗೆಲ್ಲಿಸೋಣ ಎಂದುಕೊಂಡು ಗೆಲ್ಲಿಸಿದ್ದಾರೆ’ ಎಂದರು.
‘ಮುಖಾಂತರ ಯಾರು ಕೆಲಸ ಮಾಡಲ್ಲವೋ ಅವರನ್ನು ಜನ ಕಿತ್ತು ಹಾಕುತ್ತಾರೆ ಎಂಬುದಕ್ಕೆ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಸೋಲು ಉದಾಹರಣೆ. ನರೇಂದ್ರ ಮೋದಿ, ಅಮಿತ್ ಶಾ, ಹವಾಗಿಂತಲೂ ಕರ್ನಾಟಕದಲ್ಲಿ ಬಿಜೆಪಿ ಹವಾ ಕೆಟ್ಟು ಹೋಗಿತ್ತು. ಹೀಗಾಗಿ ಜನರು ಅವರನ್ನು ತಿರಸ್ಕರಿಸಿದ್ದಾರೆ’ ಎಂದು ಅಭಿಪ್ರಾಯಪಟ್ಟರು.
‘ನಾನು ಕ್ಷೇತ್ರದ ಮನೆ ಮಗನಾಗಿ ಸೇವೆ ಮಾಡುವೆ. ಪಕ್ಷದ ಎಲ್ಲ ಮುಖಂಡರು, ಹಿರಿಯರು, ನಮ್ಮ ಎಲ್ಲ ಕಾರ್ಯಕರ್ತರು ಅತ್ಯಂತ ಪ್ರಾಮಾಣಿಕವಾಗಿ ಶ್ರಮಿಸಿದ್ದು, ಎಲ್ಲರಿಗೂ ಅಭಿನಂದನೆ ಸಲ್ಲಿಸುವೆ’ ಎಂದರು.