ಹುಬ್ಬಳ್ಳಿ: ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಹುಬ್ಬಳ್ಳಿ ಗ್ರಾಮಾಂತರ ವಿಭಾಗದ 8 ಮಂದಿ ಕೋವಿಡ್ನಿಂದ ಗುಣಮುಖರಾಗಿದ್ದಾರೆ ಎಂದು ವಿಭಾಗೀಯ ನಿಯಂತ್ರಣಾಧಿಕಾರಿ ಎಚ್. ರಾಮನಗೌಡರ್ ಹೇಳಿದ್ದಾರೆ.
ಸೋಂಕಿತ 11 ಮಂದಿಯನ್ನು ಹುಬ್ಬಳ್ಳಿಯ ಕಿಮ್ಸ್ ಕೋವಿಡ್ ಆಸ್ಪತ್ರೆ ಮತ್ತು ವಿವಿಧ ಚಿಕಿತ್ಸಾ ಕೇಂದ್ರಗಳಿಗೆ ದಾಖಲಿಸಲಾಗಿತ್ತು. ಈ ಪೈಕಿ, 8 ಮಂದಿ ಗುಣಮುಖರಾಗಿ ಹೋಂ ಕ್ವಾರಂಟೈನ್ ಸಹ ಮುಗಿಸಿದ್ದಾರೆ. ಉಳಿದ ಮೂವರು ಸದ್ಯದ್ಲಲೇ ಬಿಡುಗಡೆಯಾಗಿದ್ದಾರೆ.
ಹುಬ್ಬಳ್ಳಿ ವಿಭಾಗದಲ್ಲಿ ಒಟ್ಟು 2,170 ಸಿಬ್ಬಂದಿ ಇದ್ದು, 55 ವರ್ಷ ದಾಟಿದವರಿಗೆ ಕರ್ತವ್ಯದಿಂದ ವಿನಾಯತಿ ನೀಡಲಾಗಿದೆ. ವಯೋಮಿತಿಯ ಮಿತಿ ಇಲ್ಲದೆ ಹೃದಯ ರೋಗ, ಮಧುಮೇಹ, ಬಿ.ಪಿ ಮತ್ತಿತರ ಕಾಯಿಲೆಗಳಿಂದ ಬಳಲುತ್ತಿರುವವರಿಗೆ ರಜೆ ನೀಡಲಾಗಿದೆ.
ನಿತ್ಯ ಕರ್ತವ್ಯಕ್ಕೆ ಹಾಜರಾಗುವ ಸಿಬ್ಬಂದಿಗೆ ಥರ್ಮಲ್ ಸ್ಕ್ರೀನಿಂಗ್ ಮಾಡಲಾಗುತ್ತಿದೆ. ವಿಭಾಗೀಯ ಕಚೇರಿ, ಕಾರ್ಯಾಗಾರ, ಬಸ್ ಘಟಕಗಳು, ಬಸ್ಸುಗಳು ಹಾಗೂ ಬಸ್ ನಿಲ್ದಾಣಗಳಲ್ಲಿ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.