ಹುಬ್ಬಳ್ಳಿ: ‘ಪಂಚಮಸಾಲಿ ಸಮಾಜದ ಒಂದೊಂದು ಪೀಠಗಳು ಒಬ್ಬೊಬ್ಬ ಬಿಜೆಪಿ ನಾಯಕರ ಹಿಡಿತದಲ್ಲಿವೆ. ಹರಿಹರ ಪೀಠ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೂಡಲಸಂಗಮ ಪೀಠ ಬಸನಗೌಡ ಪಾಟೀಲ ಯತ್ನಾಳ ಮತ್ತು ಇನ್ನೊಂದು ಪೀಠದ ಮೇಲೆ ಮುರುಗೇಶ ನಿರಾಣಿ ಹಿಡಿತ ಸಾಧಿಸಿದ್ದಾರೆ’ ಎಂದು ಅಖಿಲ ಭಾರತ ವೀರಶೈವ ಮಹಾಸಭಾದ ಕೇಂದ್ರ ಸಮಿತಿ ಸದಸ್ಯ ಹಾಗೂ ಮಾಜಿ ಸಂಸದ ಮಂಜುನಾಥ ಕುನ್ನೂರ ಆರೋಪಿಸಿದರು.
‘ಈ ಪೀಠಗಳು 2008ರ ನಂತರ ಹುಟ್ಟಿಕೊಂಡಿವೆ. ನಮ್ಮ ಸಮಾಜಕ್ಕೆ ಪಂಚಪೀಠಗಳೇ ಮೂಲ. ನಾನು ಒಕ್ಕಲಿಗರ ಸಂಘದ ರೀತಿ ಸ್ವಾಮೀಜಿಗಳ ರಹಿತವಾದ ಪಂಚಮಸಾಲಿ ಸಮಾಜದ ಸಂಘವನ್ನು ಸ್ಥಾಪಿಸುವ ಗುರಿ ಹೊಂದಿದ್ದೇನೆ’ ಎಂದು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
‘ಸರ್ಕಾರ ನೀಡಿರುವ ಮೀಸಲಾತಿಯನ್ನು ಪಂಚಮಸಾಲಿ ಸಮಾಜ ಒಪ್ಪುವುದಿಲ್ಲ. ಸರ್ಕಾರ ಮೀಸಲಾತಿ ನೀಡಿದೆ ಎಂದು ಬಸನಗೌಡ ಪಾಟೀಲ ಯತ್ನಾಳ, ಬಸವಜಯ ಮೃತ್ಯುಂಜಯ ಸ್ವಾಮೀಜಿ ಕೃತಜ್ಞತೆ ಸಲ್ಲಿಸಿ, ಸಮಾಜಕ್ಕೆ ನ್ಯಾಯ ಸಿಕ್ಕಿದೆ ಎಂದು ಹೇಳುತ್ತಿರುವುದು ಸಮಂಜಸವಲ್ಲ. ಇದೆಲ್ಲವೂ ಚುನಾವಣಾ ಗಿಮಿಕ್’ ಎಂದು ದೂರಿದರು.