ಹುಬ್ಬಳ್ಳಿ: ಇಲ್ಲಿನ ಹೆಗ್ಗೇರಿಯ ಭುವನೇಶ್ವರಿ ನಗರದ ದಲಿತರ ಕಾಲೊನಿಯಲ್ಲಿ ಉಡುಪಿಯ ಪೇಜಾವರ ಮಠದ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ ಗುರುವಾರ ಪಾದಯಾತ್ರೆ ನಡೆಸಿದರು. ಭಕ್ತರು ಹೂವು ಸುರಿದು ಭಕ್ತಿ ಸಮರ್ಪಿಸಿದರು. ಜೈಶ್ರೀರಾಮ್, ಬೋಲೋ ಭಾರತ್ ಮಾತಾಕಿ ಜೈ ಘೋಷಣೆ ಕೂಗಿದರು.
ವಿಶ್ವ ಹಿಂದೂ ಪರಿಷತ್ ಹುಬ್ಬಳ್ಳಿ ಮಹಾನಗರದ ಧರ್ಮಚಾರಿ ಸಂಪರ್ಕ ಪ್ರಮುಖ ಯಲ್ಲಪ್ಪ ಬಾಗಲಕೋಟಿ ಅವರ ಮನೆಗೆ ಭೇಟಿ ನೀಡಿದ ಸ್ವಾಮೀಜಿ, ಫಲಮಂತ್ರಾಕ್ಷತೆ ವಿತರಿಸಿದರು. ವಿಶ್ವ ಹಿಂದೂ ಪರಿಷತ್ ಉತ್ತರ ಪ್ರಾಂತ ಪ್ರಚಾರಕ ಬಸವರಾಜ್ ಅವರು ಕುಟುಂಬ ಸದಸ್ಯರನ್ನು ಸ್ವಾಮೀಜಿಗೆ ಪರಿಚಯಿಸಿದರು.
ಭುವನೇಶ್ವರಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ಬಳಿಕ ಮಾತನಾಡಿದ ಸ್ವಾಮೀಜಿ, ‘ದೇಶದಲ್ಲಿರುವ ಎಲ್ಲರೂ ಸನಾತನ ಧರ್ಮೀಯರು. ಶ್ರೀರಾಮ ಧರ್ಮದ ಪ್ರತಿರೂಪ. ಶತಮಾನಗಳ ನ್ಯಾಯಯುತ ಹೋರಾಟದ ಫಲವಾಗಿ ಅಯೋಧ್ಯೆಯಲ್ಲಿ ಶ್ರೀರಾಮಮಂದಿರ ನಿರ್ಮಾಣವಾಗುತ್ತಿದೆ’ ಎಂದು ಹೇಳಿದರು.
‘ಯಾರಿಗೂ ಅನ್ಯಾಯ ಮಾಡದೆ ಎಲ್ಲರೂ ಒಂದಾಗಿ ಬಾಳಿದರೆ ಅದು ದೇವರಿಗೆ ಸಲ್ಲಿಸುವ ದೊಡ್ಡ ಪೂಜೆ. ಇನ್ನೊಬ್ಬರನ್ನು ಹೊಡೆಯುತ್ತೇವೆ, ಬಡಿಯುತ್ತೇವೆ ಎನ್ನುವುದು ರಾವಣನ ಸಂಸ್ಕೃತಿ. ಸುಖ, ಶಾಂತಿ, ನೆಮ್ಮದಿ ಬಯಸುವವರು ರಾಮಚಂದ್ರನ ಆದರ್ಶ ಪರಿಪಾಲಿಸಬೇಕು’ ಎಂದರು.
ನಾಣ್ಯದ ತುಲಾಭಾರ: ವಿಶ್ವಪ್ರಸನ್ನ ತೀರ್ಥ ಶ್ರೀಗಳ ಷಷ್ಟ್ಯಬ್ದ ಪ್ರಯುಕ್ತ ಅಖಿಲ ಭಾರತ ಮಾಧ್ವ ಮಹಾಮಂಡಲದ ವತಿಯಿಂದ ಹುಬ್ಬಳ್ಳಿಯ ಶ್ರೀಕೃಷ್ಣ ಕಲ್ಯಾಣ ಮಂಟಪದಲ್ಲಿ ಗುರುವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಶ್ರೀಗಳಿಗೆ ನಾಣ್ಯದ ತುಲಾಭಾರ ಮಾಡಲಾಯಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.