ಧಾರವಾಡ: ‘ಬಸವಣ್ಣನವರು ವಿಶ್ವಕ್ಕೆ ವಚನ ಸಾಹಿತ್ಯವನ್ನು ಕೊಡುಗೆ ನೀಡಿದರು. ಸಮಾಜದ ಏಳಿಗೆಗೆ ಶ್ರಮಿಸಿದರು’ ಎಂದು ಸಾಹಿತಿ ಎಸ್.ಆರ್. ಗುಂಜಾಳ್ ಹೇಳಿದರು.
ನಗರದ ಲಿಂಗಾಯತ ಟೌನ್ಹಾಲ್ ಆವರಣದಲ್ಲಿ ಪ್ರವಚನ ಸಮಿತಿ ಏರ್ಪಡಿಸಿರುವ ನಿಜಗುಣಾನಂದ ಸ್ವಾಮಿಜಿ ಅವರ ವಿಶ್ವಧರ್ಮ ಪ್ರವಚನ ಸಮಾರಂಭದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
‘ಸಕಲ ಜೀವರಾಶಿಗೆ ಲೇಸು ಬಯಸಿದ ವಿಶ್ವ ಗುರು ಬಸವಣ್ಣ, ಮೂಢನಂಬಿಕೆ, ಕಂದಾಚಾರಗಳಿಂದ ತುಂಬಿದ್ದ ಸಮಾಜದ ಸುಧಾರಣೆಗೆ ಹೋರಾಡಿದರು. 12ನೇ ಶತಮಾನದಲ್ಲಿ ಸ್ತ್ರೀ ಸಮಾನತೆಗಾಗಿ ಶ್ರಮಿಸಿದರು. ಅವರ ವಚನಗಳು ದಾರಿದೀಪವಾಗಿವೆ’ ಎಂದರು.
ಮಲ್ಲಿಕಾರ್ಜುನ ಸ್ವಾಮೀಜಿ ಮಾತನಾಡಿ, ‘ಯುವಕರು ಹಾಗೂ ಮಕ್ಕಳಿಗೆ ಬಸವ ಸಂಸ್ಕೃತಿ, ಸಂಸ್ಕಾರ ತಿಳಿಸುವ ಅಗತ್ಯವಿದೆ. ಉತ್ತಮ ಪ್ರಜೆಗಳಾಗಿ, ಸಮಾಜದ ಒಳಿತಿಗಾಗಿ ದುಡಿಯುವ ಪೀಳಿಗೆ ಸಿದ್ಧವಾಗಬೇಕು. ಅವರನ್ನು ಪ್ರವಚನ ಕಾರ್ಯಕ್ರಮಕ್ಕೆ ಕರೆತರಬೇಕು’ ಎಂದು ಹೇಳಿದರು.